ಉಡುಪಿ : ಬ್ರಹ್ಮಾವರ ತಾಲೂಕು ನೀಲಾವರದಲ್ಲಿ ಭಾನುವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಮಟಪಾಡಿ ಗ್ರಾಮದಿಂದ ನೀಲಾವರ ಕಡೆಗೆ ಹೋಗುವ ಮಾರ್ಗದ ರಸ್ತೆ ಅಕ್ಕಪಕ್ಕಗಳಲ್ಲಿ ಬೆಂಕಿ ಅಬ್ಬರ ಜೋರಾಗಿ ಕಾಣಿಸಿಕೊಂಡಿತು. ಜೆನಿತ್ ಡೈ ಮೇಕರ್ ಇಂಡಸ್ಟ್ರಿ ಸಮೀಪದ ರಸ್ತೆಯ ಎರಡೂ ಬದಿಗಳಲ್ಲಿ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ.

ಅವಘಡದಲ್ಲಿ ಪೈನಾಪಲ್ ತೋಟ, ಒಣಹುಲ್ಲು, ಗಿಡಗಂಟಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸುತ್ತಮುತ್ತಲಿನ ಅಡಿಕೆ ತೋಟ, ತೆಂಗು ಹಾಗೂ ಹಲಸು ಗಿಡಗಳಿಗೂ ಹಾನಿಯಾಗಿದೆ.

ಪರಿಸರದಲ್ಲಿ ಸಣ್ಣಪುಟ್ಟ ಕೈಗಾರಿಕೆಗಳು ಇದ್ದರೂ, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ.

ಇತ್ತೀಚಿನ ದಿನಗಳಲ್ಲಿ ಬ್ರಹ್ಮಾವರ ಪರಿಸರದಲ್ಲಿ ಪದೇಪದೇ ಅಗ್ನಿ ಅವಘಡಗಳು ಸಂಭವಿಸುತ್ತಿರುವುದರಿಂದ, ತಾಲೂಕು ಕೇಂದ್ರದಲ್ಲೇ ಶಾಶ್ವತ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕೆಂಬ ಬೇಡಿಕೆ ಸಾರ್ವಜನಿಕರಲ್ಲಿ ತೀವ್ರವಾಗಿದೆ.

ಯಾವುದೇ ಅವಘಡ ನಡೆದರೂ ಉಡುಪಿಯಿಂದಲೇ ಅಗ್ನಿಶಾಮಕ ವಾಹನ ಆಗಮಿಸಬೇಕಾಗುತ್ತಿರುವುದು ವಿಳಂಬಕ್ಕೆ ಕಾರಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆಕ್ರೋಶವೂ ವ್ಯಕ್ತವಾಗುತ್ತಿದೆ.



