ಉಡುಪಿ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗುಲ್ವಾಡಿ ಸೌಕೂರು ಆಳ್ವರ ಮನೆಯ ಶಶಾಂಕ್ ಶೆಟ್ಟಿ ಯಾನೆ ಶಶಿಕಿರಣ್ ಯಾನೆ ಕಿರಣ್ ಶೆಟ್ಟಿ ಯಾನೆ ರಾಕೇಶ್ ಯಾನೆ ಶಶಿ (32) ಎಂದು ಗುರುತಿಸಲಾಗಿದೆ.

ಆರೋಪಿಯ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7, ಹೆಬ್ರಿಯಲ್ಲಿ 1, ಕಲಘಟಕಿಯಲ್ಲಿ 1, ಕೋಟದಲ್ಲಿ 1 ಹಾಗೂ ಬೆಂಗಳೂರು ಚಂದ್ರ ಲೇಔಟ್ ಠಾಣೆಯಲ್ಲಿ 1 ಪ್ರಕರಣಗಳಂತೆ ಕಳ್ಳತನ, ಸುಲಿಗೆ, ಹನಿಟ್ರಾಪ್ ಸೇರಿದಂತೆ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ನ್ಯಾಯಾಲಯವು ಈವರೆಗೆ 12 ಬಾರಿ ವಾರೆಂಟ್ ಹೊರಡಿಸಿದ್ದರೂ, ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು ನಾಲ್ಕು ವರ್ಷಗಳಿಂದ ಪರಾರಿಯಾಗಿದ್ದನು.

ಆರೋಪಿಯ ಪತ್ತೆಗೆ ಕಳೆದ ನಾಲ್ಕು ವರ್ಷಗಳಿಂದ ಪೊಲೀಸರು ನಿರಂತರ ಪ್ರಯತ್ನ ನಡೆಸುತ್ತಿದ್ದು, ಖಚಿತ ಮಾಹಿತಿಯ ಆಧಾರದಲ್ಲಿ ಫೆಬ್ರವರಿ 15ರಂದು ಕುಂದಾಪುರ ತಾಲೂಕು ಬಿದ್ಕಲ್ ಕಟ್ಟೆ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



