ಉಡುಪಿ : ನವದೆಹಲಿ ವಸಂತಕುಂಜ್ ನಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ವಿಜಯದಶಮೀ ಪ್ರಯುಕ್ತ ಲೋಕಕಲ್ಯಾಣಾರ್ಥ ಮತ್ತು ವಿಶೇಷವಾಗಿ ಸಮಸ್ತ ದೆಹಲಿ ಜನತೆಯ ಕ್ಷೇಮ ಸಮೃದ್ಧಿಗಾಗಿ ಪ್ರಾರ್ಥಿಸಿ ಚಂಡಿಕಾ ಯಾಗವು ವೈಭವದಿಂದ ನೆರವೇರಿತು.

ಮುಖ್ಯಮಂತ್ರಿ ರೇಖಾ ಗುಪ್ತಾ ದಂಪತಿಯ ಹೆಸರು ಜನ್ಮ ನಕ್ಷತ್ರ ರಾಶಿ ಉಲ್ಲೇಖಿಸಿಯೇ ಯಾಗದ ಸಂಕಲ್ಪ ನೆರವೇರಿಸಲಾಯಿತು.

ರೇಖಾ ಅವರು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು .ಶ್ರೀಗಳು ಈ ಯಜ್ಞದಿಂದ ಲೋಕ ಕ್ಷೇಮವಾಗಲಿ, ಸಮಸ್ತ ದೆಹಲಿ ಜನತೆಗೆ ಶಾಂತಿ ಸುಭಿಕ್ಷೆ ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸಿ, ದೆಹಲಿ ಅಭಿವೃದ್ಧಿಗಾಗಿ ರೇಖಾ ಗುಪ್ತಾ ನೇತೃತ್ವದ ಸರ್ಕಾರ ಕೈಗೊಳ್ಳುತ್ತಿರುವ ಎಲ್ಲ ಕಾರ್ಯಗಳೂ ಯಶಸ್ವಿಯಾಗಲಿ, ವಿಶೇಷವಾಗಿ ಯಮುನಾ ನದಿಯನ್ನು ವಿಷಮುಕ್ತಗೊಳಿಸುವ ಕಾರ್ಯ ಅತ್ಯಂತ ಶ್ಲಾಘನೀಯ.

ಈ ಕಾರ್ಯದಲ್ಲಿ ಸರ್ಕಾರದ ಜೊತೆ ಸಮಸ್ತ ದೆಹಲಿ ಜನತೆ ಕೈಜೋಡಿಸಿ ಯಶಸ್ವಿಗೊಳಿಸುವಂತಾಗಬೇಕು ಎಂದು ಹಾರೈಸಿದರು. ಶ್ರೀಗಳವರು ಉತ್ತರಭಾರತ ತೀರ್ಥ ಕ್ಷೇತ್ರ ಸಂಚಾರದಲ್ಲಿರುವ ಹಿನ್ನೆಲೆಯಲ್ಲಿ ನವದೆಹಲಿಯ ಮಠದ ಶಾಖೆಯಲ್ಲಿ ಅವರ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು
