ಕೋಟ: ಕಳೆದ ರಾತ್ರಿಯಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆ ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರಿನ ಹರ್ತಟ್ಟು ನಿವಾಸಿ ಸೀತಾರಾಮ್ ದೇವಾಡಿಗ ಅವರ ಮನೆ ಮಳೆಗೆ ಸಂಪೂರ್ಣ ನೆಲಸಮವಾಗಿದೆ.

ಕುಸಿತದಿಂದ ಮನೆಯಲ್ಲಿ ಇದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿದ್ದು ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯ ಅವಾಂತರದಿಂದ ಮನೆ ಕಳೆದುಕೊಂಡ ಸೀತಾರಾಮ ದೇವಾಡಿಗರವರ ಕುಟುಂಬ ಬೀದಿಗೆ ಬಂದಿತ್ತು.

ಮಳೆಯಿಂದಾಗಿ ಮನೆ ಕಳೆದಕೊಂಡ ಪ್ರದೇಶಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕಳೆದುಕೊಂಡ ಸೀತಾರಾಮ ದೇವಾಡಿಗ ಅವರಿಗೆ, ಶಾಸಕರು ಬ್ರಹ್ಮಾವರ ತಹಶೀಲ್ದಾರರಾದ ಶ್ರೀಕಾಂತ ಹೆಗ್ಡೆ ಇವರಿಗೆ ಕರೆ ಮಾಡಿ ಪ್ರಕೃತಿ ವಿಕೋಪ ದಡಿ ತುರ್ತು ಪರಿಹಾರ ನೀಡುವ ಬಗ್ಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೋಟ ಗ್ರಾಮಲೆಕ್ಕಾಧಿಕಾರಿ ಚೆಲುವರಾಜ್, ಗ್ರಾ.ಪಂ. ಸದಸ್ಯ ಅಜಿತ್ ದೇವಾಡಿಗ, ಉಪಾಧ್ಯಕ್ಷ ಪಾಂಡು ಪೂಜಾರಿ, ಮತ್ತು ಪ್ರೇಮ ಹರೀಶ ದೇವಾಡಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಯಿತು.