ಉಡುಪಿ : ಹುಟ್ಟುವಾಗಲೇ ನಾವೆಲ್ಲ ದೇವ, ಪಿತೃ, ಋಷಿ, ಮನುಷ್ಯ ಹಾಗೂ ಭೂತ ಋಣಗಳೆಂಬ 5 ಬಗೆಯ ಋಣಗಳನ್ನು ಹೊತ್ತುಕೊಂಡೇ ಬರ್ತೇವೆ. ಅವುಗಳಲ್ಲಿ ದೇವ ಋಣ ಬಹಳ ದೊಡ್ಡದು. ಹುಟ್ಟಿದ ಮೇಲೆ ವಾಸಿಸಲು ಭೂಮಿ, ತಿನ್ನಲು ಆಹಾರ ತೊಡಲು ಬಟ್ಟೆ ಹೀಗೆ ಯಾವೊಂದೂ ನಾವು ಸೃಷ್ಟಿಸಿದ್ದಲ್ಲ. ಖಾಲಿ ಕೈಲಿ ಬಂದು ಖಾಲಿ ಕೈಯಲ್ಲಿ ಹೋಗ್ತೇವೆ. ಹಾಗಿರುವಾಗ ಈ ಭೂಮಿ ಈ ಆಸ್ತಿ ಹಣ ಇದೆಲ್ಲ ನಮ್ಮದು ನಮ್ಮದು ಅಂತ ಹಾರಾಡ್ತೇವೆ. ಆದರೆ ಯಾವುದು ನಾವು ಸೃಷ್ಟಿಸಿದ್ದಲ್ಲವೋ ಅದನ್ನು ನಮ್ಮದು ಎಂದು ಹಕ್ಕು ಸ್ಥಾಪಿಸುವ ಅಧಿಕಾರವೂ ನಮಗಿಲ್ಲ.. ಒಂದು ದೈವೀ ಶಕ್ತಿಯ ಕೃಪೆಯಿಂದ ನಮಗೆ ಇದು ದೊರೆತಿದೆ. ಹಾಗಿರುವಾಗ ಆ ದೈವೀ ಋಣದ ಎಚ್ಚರ ನಮಗೆ ಜೀವನಪೂರ್ತಿ ಇರಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂದೇಶ ನೀಡಿದರು.

ಪೇಜಾವರ ಮಠದ ಅಧೀನದ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸಂಜೆ ಜರುಗಿದ ವಸಂತೋತ್ಸವ ಕಾರ್ಯಕ್ರಮ ದಲ್ಲಿ ಪಟ್ಟದ ದೇವರ ಪೂಜೆ ನೆರವೇರಿಸಿ ನೂರಾರು ಭಕ್ತರಿಗೆ ವಸಂತೋತ್ಸವ ಸಂದೇಶ ನೀಡಿತ್ತಾ, ನಾವೇನು ಬೆಳೀತೇವೆ , ಸಂಪಾದಿಸ್ತೇವೆ ಉಣ್ತೇವೆ ತೊಡ್ತೇವೆ ಅನುಭವಿಸ್ತೇವೆ .ಎಲ್ಲವೂ ಹೇ ಭಗವಂತಾ ನಂದೇನಲ್ಲವೋ ಸ್ವಾಮೀ ನಿಂದೇ ಇದೆಲ್ಲವೂ ಅಂತ ದೇವರಿಗೆ ಅರ್ಪಿಸಿ ಅನುಭವಿಸಿದೆವು ಎಂದಾದರೆ ನಾವು ನಮ್ಮದು ಎಂಬ ಅಹಂಕಾರ ಭಾವ ನಮಗೆ ಬರಲು ಅವಕಾಶ ಇರೋದಿಲ್ಲ .ಆಗ ನಮಗೆ ಭಗವಂತನ ಅನುಗ್ರಹ ದೊರೆತು ಸಾರ್ಥಕ ಜೀವನ ಸಾಧ್ಯವಾಗ್ತದೆ. ಋತುಗಳಲ್ಲಿ ತಾನು ವಸಂತ ಎಂದು ಸ್ವಯಂ ಕೃಷ್ಣನೇ ಸಾರಿದ್ದಾನೆ. ಸಮೃದ್ಧಿ ತುಂಬಿರುವ ಈ ಹೊತ್ತಲ್ಲಿ ಪ್ರಕೃತಿಯಿಂದ ನಾವು ಪಡೆವ ಹಣ್ಣು ಹಂಪಲುಗಳನ್ನು ದೇವರಿಗೆ ಅರ್ಪಿಸಿ ಸ್ವೀಕರಿಸುವುದೇ ವಸಂತೋತ್ಸವದ ಸಾರವಾಗಿದೆ ಎಂದರು. ಮಠದ ಅಧಿಕಾರಿಗಳು ಅನೇಕ ವಿದ್ವಾಂಸರು , ವಿವಿಧ ಕ್ಷೇತ್ರಗಳ ಗಣ್ಯರು ನೂರಾರು ಭಕ್ತರು ಭಾಗವಹಿಸಿದ್ದರು.
