ಉಡುಪಿ : ದೇಶದ ಗಡಿಯನ್ನು ಕಾಯುವ ಯೋಧರನ್ನು ಗೌರವಿಸುವ ಮನೋಭಾವನೆ ಅತ್ಯಂತ ಮಹತ್ವದ್ದಾಗಿದ್ದು, ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಯೋಧರ ಬದುಕು ಎಷ್ಟು ಕಠಿಣವಾಗಿರುತ್ತದೆ ಎಂಬುದಕ್ಕೆ ಯೋಧ ಅನೂಪ್ ಪೂಜಾರಿ ಸೇರಿದಂತೆ ಹಲವರ ಕಥೆ–ವ್ಯಥೆಯೇ ಸಾಕ್ಷಿಯಾಗಿದೆ ಎಂದು ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಸಾಲಿಗ್ರಾಮ ಹೇಳಿದರು.

ಅವರು ಬುಧವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಕಳೆದ ವರ್ಷ ಅಮರರಾದ ಯೋಧ ಅನೂಪ್ ಪೂಜಾರಿ ಬೀಜಾಡಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಸಮಾಜದ ಬಗ್ಗೆ ಸದಾ ಕಾಳಜಿ ಹೊಂದಿರುವ ಪಂಚವರ್ಣ ಸಂಘಟನೆ ಯೋಧರ ಪುಣ್ಯಸ್ಮರಣೆಯನ್ನು ಸದಾ ಮನದಲ್ಲಿ ಕಾಯ್ದು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ನಿವೃತ್ತ ಯೋಧ ಕೋಟ ರಾಮಚಂದ್ರ ಗಾಣಿಗ ಕೋಟೇಶ್ವರ ಅವರು ಅನೂಪ್ ಪೂಜಾರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೇಶದ ಗಡಿಯಲ್ಲಿ ಯೋಧರು ಎದುರಿಸುವ ಪರಿಸ್ಥಿತಿಗಳು ಹಾಗೂ ಅನೂಪ್ ಪೂಜಾರಿಯವರ ಸೇವೆಯ ಕುರಿತು ವಿವರಿಸಿದರು. ಸಭೆಯಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಹಂದಟ್ಟು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



