ಉಡುಪಿ: ತಪ್ಪೇ ಮಾಡದ ವಿದ್ಯಾರ್ಥಿಯನ್ನು ಮೂರು ತಾಸುಗಳ ಕಾಲ ತರಗತಿಯ ಹೊರಗಡೆ ನಿಲ್ಲಿಸಿ, ನೀರು ಕೂಡ ನೀಡದೆ ಮಾನಸಿಕವಾಗಿ ಹಿಂಸೆ ನೀಡಿದ ಆರೋಪದಡಿ ಉಡುಪಿಯ ನಿಟ್ಟೂರಿನ ಸಿಲಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ. 3ರಂದು ಕಾಲೇಜಿನ ತರಗತಿಯಲ್ಲಿ ಪಾಠ ನಡೆಯುತ್ತಿದ್ದ ವೇಳೆ ಕೆಲ ವಿದ್ಯಾರ್ಥಿಗಳು ಸಿಡಿಮದ್ದನ್ನು ಸಿಡಿಸಿದ್ದರೆಂದು ಆರೋಪಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಡಿದ ವಿದ್ಯಾರ್ಥಿಗಳು ತಮ್ಮ ತಪ್ಪನ್ನು ಕಾಲೇಜಿನ ಪ್ರಾಂಶುಪಾಲರ ಮುಂದೆ ಸ್ವತಃ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ಆದರೆ, ಈ ಎಲ್ಲದರ ನಡುವೆಯೂ ಯಾವುದೇ ತಪ್ಪು ಮಾಡದ 17 ವರ್ಷದ ವಿದ್ಯಾರ್ಥಿಯನ್ನು ಪ್ರಾಂಶುಪಾಲರು ತರಗತಿಯ ಹೊರಗಡೆ ಸುಮಾರು ಮೂರು ತಾಸುಗಳ ಕಾಲ ನಿಲ್ಲಿಸಿ, ನೀರು ಕೂಡ ನೀಡದೆ ಶಿಕ್ಷೆ ವಿಧಿಸಿರುವುದು ಗಂಭೀರ ಆರೋಪವಾಗಿದೆ.

ಈ ಘಟನೆಯಿಂದಾಗಿ ವಿದ್ಯಾರ್ಥಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದು, ಕಾಲೇಜಿಗೆ ಹೋಗಲು ಭಯಭೀತನಾಗಿದ್ದಾನೆ, ಅನ್ಯಾಯ ನಡೆದಿದೆ ಎಂದು ವಿದ್ಯಾರ್ಥಿಯ ಕುಟುಂಬ ಸದಸ್ಯರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳ ಮೇಲೆ ಈ ರೀತಿಯ ಅಮಾನುಷ ಮತ್ತು ಅಸಂವಿಧಾನಿಕ ಶಿಕ್ಷೆಗಳು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದ್ದು, ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.



