ಉಡುಪಿ: ತಡರಾತ್ರಿ ತಲವಾರು ಹಿಡಿದು ಮನೆಗೆ ಬಂದ ಕಿಡಿಗೇಡಿಗಳು ಹೆಂಡತಿ ಮಗುವಿನೊಂದಿಗೆ ಮಲಗಿದ್ದ ಯುವಕನನ್ನ ಕಡಿದು ಕೊಲೆ ಮಾಡಿದ ಘಟನೆ ಉಡುಪಿಯ ಪುತ್ತೂರು ಎಂಬಲ್ಲಿ ನಡೆದಿದೆ. ವಿನಯ್ ದೇವಾಡಿಗ ( 35) ಹತ್ಯೆಯಾದ ಯುವಕ.

ನಿನ್ನೆ ರಾತ್ರಿ 11:00 ಸುಮಾರಿಗೆ ಪುತ್ತೂರಿನಲ್ಲಿರುವ ವಿನಯ್ ಮನೆಗೆ ಮೂವರು ಆಗಮಿಸಿದ್ದರು. ಮನೆಯವರು ಏನು ವಿಷಯ ಎಂದು ವಿಚಾರಿಸಿದಾಗ ವಿನಯ್ ಇದ್ದಾನ ಎಂದು ಆರೋಪಿಗಳು ಮನೆಯವರಲ್ಲಿ ಕೇಳಿದ್ದಾರೆ. ಯಾರೋ ಪರಿಚಿತ ಸ್ನೇಹಿತರಿರಬಹುದು ಎಂದು ಮನೆಯವರು ಮನೆಯ ಬಾಗಿಲನ್ನು ತೆಗೆದಿದ್ದಾರೆ. ಮನೆಯ ಒಳಗೆ ಪ್ರವೇಶ ಪಡೆದ ದುಷ್ಕರ್ಮಿಗಳು ನೇರವಾಗಿ ವಿನಯ್ ರೂಮಿಗೆ ನುಗ್ಗಿದ್ದಾರೆ. ಹೆಂಡತಿ ಮತ್ತು ಮಗುವಿನೊಂದಿಗೆ ಮಲಗಿದ್ದ ವಿನಯ್ ಮೇಲೆ ಮೂವರು ದುಷ್ಕರ್ಮಿಗಳು ತಳವಾರ್ ಬೀಸಿ ಕೊಚ್ಚಿ ಕಡಿದು ಹತ್ಯೆ ಮಾಡಿದ್ದಾರೆ. ಈ ವೇಳೆ ದುಷ್ಕರ್ಮಿ ಗಳನ್ನು ತಡೆಯಲು ಹೋದ ಹೆಂಡತಿಯ ಕೈಗೂ ಕೂಡ ಗಂಭೀರವಾದ ಗಾಯವಾಗಿದೆ.

ಅಚಾನಕ್ ಆದ ಈ ಘಟನೆಯಿಂದ ಮನೆಯವರು ಹೌಹಾರಿ ಹೋಗಿದ್ದು ಏನು ಮಾಡಬೇಕು ಎಂದು ಆಲೋಚಿಸುವ ಮೊದಲೇ ವಿನಯ್ ರಕ್ತದ ನಡುವಿನಲ್ಲಿ ಬಿದ್ದಿದ್ದಾನೆ. ನಿನ್ನೆ ಮುಂಜಾನೆಯಿಂದಲೇ ಫೋನಿನಲ್ಲಿ ವಿನಯ್ ಯಾರೊಂದಿಗೆ ವಾಗ್ವಾದ ಮಾಡುತ್ತಾ ಇರುವುದನ್ನು ಮನೆಯವರು ಗಮನಿಸಿದ್ದರು. ರಾತ್ರಿ ವೇಳೆ ಮನೆಗೆ ಬಂದ ವ್ಯಕ್ತಿಗಳ ಮುಖವನ್ನಷ್ಟೇ ನೋಡಿದ ಮನೆಯವರು ಕೈಯಲ್ಲಿ ಹಿಡಿದಿದ್ದ ಮಾರಾಕಾಸ್ತ್ರ ಗಮನಿಸದೇ ಇರುವುದು ದೊಡ್ಡ ಆಚಾತುರ್ಯಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಗಾಯಗೊಂಡ ವಿನಯ್ ಪತ್ನಿ ಸತ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ


