ಉಡುಪಿ: ಡಿಸೆಂಬರ್ 14ರ ರವಿವಾರ ಮುಂಜಾನೆ 7:45ಕ್ಕೆ ಧಾನ್ಯ ಮುಹೂರ್ತ ಕಾರ್ಯಕ್ರಮವು ನೆರವೇರಲಿದೆ, 2026ರ ಜನವರಿ 18ರಂದು ಆರಂಭಗೊಳ್ಳಲಿರುವ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಪೂರ್ವ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದು, ಈ ಸಿದ್ಧತೆಗಳ ಭಾಗವಾಗಿ ಧಾನ್ಯ ಮಹೂರ್ತ ನಡೆಯಲಿದೆ ಎಂದು ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

ರಥಬೀದಿಯ ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ಸೇವೆ ಸುಗಮವಾಗಲು ಅಗತ್ಯವಿರುವ ಅಕ್ಕಿ ಮತ್ತು ಬೇಳೆಗಳ ಸಂಗ್ರಹಣೆ ಈ ಧಾನ್ಯ ಮುಹೂರ್ತದ ಮುಖ್ಯ ಉದ್ದೇಶ ಎಂದು ಹೇಳಿದರು.

ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಜ.18ರ ಬೆಳಿಗ್ಗೆ ಸರ್ವಜ್ಞ ಪೀಠಾರೋಹಣ ಮಾಡಿ ಶ್ರೀಕೃಷ್ಣ ಪೂಜಾ ದೀಕ್ಷೆ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ, ಅವರು ವಿವಿಧ ಕ್ಷೇತ್ರಗಳಲ್ಲಿ ತೀರ್ಥಯಾತ್ರೆ ನಡೆಸುತ್ತಿರುವುದರಿಂದ, ಜನವರಿ ಮೊದಲ ವಾರದಲ್ಲಿ ಪುರಪ್ರವೇಶ ಮಾಡಲಿದ್ದಾರೆ ಎಂದು ದಿವಾನರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿ ಸದಸ್ಯರಾದ ಮಟ್ಟಾರು ರತ್ನಾಕರ ಹೆಗ್ಡೆ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಮಧುಕರ ಮುದ್ರಾಡಿ, ನಂದನ್ ಜೈನ್ ಮತ್ತು ಮೋಹನ ಭಟ್ ಉಪಸ್ಥಿತರಿದ್ದರು.



