ಉಡುಪಿ: ದೇಶದ ಅತ್ಯುನ್ನತ ಹಾಗೂ ಹೆಸರಾಂತ ಟಾಟಾ ಮುಂಬೈ ಮ್ಯಾರಥಾನ್ನಲ್ಲಿ ಗಮನಾರ್ಹ ಸಾಧನೆ ಮಾಡಿದ ಅಜ್ಜರ ಕಾಡು ಸರಕಾರಿ ಜಿಮ್ಮಿನ ಹಿರಿಯ ಕ್ರೀಡಾಪಟು ಸಂಜೀವ ಬಳ್ಕೂರು ಅವರನ್ನು ಜಿಮ್ಮಿನ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಜಿಮ್ಮಿನ ತರಬೇತುದಾರ ಉಮೇಶ್ ಮಟ್ಟು ಅವರು ಜಿಮ್ಮಿನ ಎಲ್ಲಾ ಸದಸ್ಯರ ಪರವಾಗಿ ಈ ಗೌರವ ಸಲ್ಲಿಸಿದರು.

ಸಂಜೀವ ಬಳ್ಕೂರು ಅವರು ಮಾಸ್ಟರ್ ಅಥ್ಲೆಟಿಕ್ಸ್ ಹಾಗೂ ಮ್ಯಾರಥಾನ್ ಓಟಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದ ಸಾಧಕರಾಗಿದ್ದಾರೆ. ಇತ್ತೀಚೆಗೆ ಜನವರಿ 18ರಂದು ನಡೆದ ಟಾಟಾ ಮುಂಬೈ ಮ್ಯಾರಥಾನ್ನಲ್ಲಿ ಭಾಗವಹಿಸಿ, 42 ಕಿಲೋಮೀಟರ್ ದೂರವನ್ನು 4 ಗಂಟೆ 56 ನಿಮಿಷಗಳಲ್ಲಿ ಪೂರ್ಣಗೊಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ತರಬೇತುದಾರ ಉಮೇಶ್ ಮಟ್ಟು, ಸಂಜೀವ ಬಳ್ಕೂರು ಅವರ ಸಾಧನೆ ಜಿಮ್ಮಿನ ಹೆಮ್ಮೆ ಮಾತ್ರವಲ್ಲದೆ, ಇತರರಿಗೆ ಪ್ರೇರಣೆಯಾಗಿದೆ. ಅವರ ಅಪೂರ್ವ ಸಾಧನೆಯಿಂದ ಅವರು ಜಿಮ್ಮಿನ ಬಲಾಢ್ಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜಿಮ್ಮಿನ ಸದಸ್ಯರಾದ ಪ್ರಶಾಂತ್ ಕೋಟ್ಯನ್ (ಮಲ್ಪೆ), ಉದಯ್ ಕುಮಾರ್ ಕಲ್ಮಾಡಿ, ಪ್ರಶಾಂತ್ ಜತ್ತನ್, ಎಲ್ಐಸಿ ಹಿರಿಯ ಅಧಿಕಾರಿ ಆನಂದ್, ದೀಪಕ್ ಕಾಮತ್, ಸುದಾಕರ್ ಬಿಜೂರು ಸೇರಿದಂತೆ ಮಹಿಳಾ ಸದಸ್ಯರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.



