ಬ್ರಹ್ಮಾವರ: ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪರಿಸರವಾದಿ ಸುನಿಲ್ ಸಾಲಿಯಾನ್ರವರು ಆಗಮಿಸಿದ್ದರು. ಅವರು ಪ್ಲಾಸ್ಟಿಕ್ನ ಇತಿಹಾಸ ಮತ್ತು ಅತಿಯಾದ ಬಳಕೆ ಅದರ ಪರಿಣಾಮಗಳ ಕುರಿತು ಮಾಹಿತಿಯನ್ನು ನೀಡಿ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಈಚೆಗೆ ಪ್ಲಾಸ್ಟಿಕ್ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ದಿನನಿತ್ಯದ ಜೀವನ ಕ್ರಮದಲ್ಲಿ ಪ್ಲಾಸ್ಟಿಕ್ ರಹಿತ ವಸ್ತುಗಳನ್ನು ಬಳಸಬೇಕೆಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಪ್ರತಿದಿನವೂ ಪರಿಸರದಿನವಾಗಿರಬೇಕು. ಸ್ವಚ್ಛತೆಯನ್ನು ನಾವು ಪಾಲಿಸಿ ಇತರರಿಗೆ ಮಾಹಿತಿಯನ್ನು ನೀಡಬೇಕು. ಗಿಡವನ್ನು ನೆಟ್ಟು ಆರೈಕೆ ಮಾಡಿ ಅವುಗಳು ಬೆಳೆದಾಗ ಮಕ್ಕಳನ್ನು ಪೋಷಿಸಿದ ಹಾಗೆ ಸಂತೃಪ್ತಿ ದೊರೆಯುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಎಲ್ಲರಿಂದಲೂ ಪ್ಲಾಸ್ಟಿಕ್ ಮುಕ್ತ ಪರಿಸರದ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತನಾಡಿ ನಾವು ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಗೆಲುವನ್ನು ಸಾಧಿಸಬೇಕು. ಹಾಗೆಯೇ ಸ್ವಚ್ಛ, ಹಸಿರು ಪ್ರಕೃತಿಯನ್ನು ನಿರ್ಮಾಣ ಮಾಡಬೇಕೆಂದರು. ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಪೇಪರ್ ಬ್ಯಾಗನ್ನು ಸ್ಥಳೀಯ ಅಂಗಡಿಗಳಿಗೆ ವಿತರಿಸಿದರು. ಶಾಲಾ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು.