ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಘ, ಹೌಸ್ ಹಾಗೂ ವಿವಿಧ ಸಂಘಗಳ ನಾಯಕರ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲೆಯ ಸ್ಕೌಟ್ ಮತ್ತು ಗೈಡ್ಸ್ನ ಮುಖ್ಯ ಆಯುಕ್ತ ಲಯನ್ ಜಯಕರ ಶೆಟ್ಟಿ ಇಂದ್ರಾಳಿಯವರು ಆಗಮಿಸಿ ಜ್ಯೋತಿಯನ್ನು ಬೆಳಗಿಸಿ ಮಾತನಾಡಿ, ಮಕ್ಕಳೆಲ್ಲರೂ ಪ್ರತಿಭಾವಂತರು. ಎಲ್ಲರೂ ಶಾಲೆಯಲ್ಲಿ ಜ್ಞಾನವನ್ನು ಪಡೆದು ಪರಿಪೂರ್ಣ ವಿಚಾರ ಹೊಂದಿದ ವಿದ್ಯಾರ್ಥಿಗಳಾಗಬೇಕು. ಅದನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಶ್ರೇಷ್ಟ ವ್ಯಕ್ತಿಗಳಾಗುತ್ತೀರಿ. ಜೀವನದಲ್ಲಿ ಶಿಸ್ತು, ಸಂಸ್ಕಾರ, ದೇವರ ಮೇಲಿನ ನಂಬಿಕೆ ಇರಬೇಕು. ಪ್ರತಿಯೊಬ್ಬರ ಮೇಲಿನ ಕಾಳಜಿ ಉತ್ತಮ ನಾಯಕತ್ವದ ಗುಣವೆಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ವಿವಿಧ ಹುದ್ದೆಗಳಿಗೆ ಆಯ್ಕೆಗೊಂಡ ಎಲ್ಲಾ ನಾಯಕರುಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದೀರಿ. ಶಾಲೆಯ ಇತರ ವಿದ್ಯಾರ್ಥಿಗಳಿಗೆ ನೀವು ಮಾದರಿಯಾಗಿದ್ದೀರಿ. ಜಿ ಎಮ್ನಲ್ಲಿ ವಿವಿಧ ಸಂಘಗಳಿದ್ದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜೀವನಕ್ಕಾಗಿ ಶಿಕ್ಷಣವನ್ನು ನೀಡುತ್ತಿದೆ. ಮಕ್ಕಳು ತಮಗೆ ಸಿಕ್ಕ ಅವಕಾಶವನ್ನು ತಿರಸ್ಕರಿಸದೆ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಎಲ್ಲಾ ನಾಯಕರಿಂದ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿ ತ್ಯಾಗ, ಸೇವೆ, ನಡೆದಂತೆ ನುಡಿಯುವುದು ಇವೆಲ್ಲವೂ ಉತ್ತಮ ನಾಯಕನ ಗುಣಗಳಾಗಿವೆ. ಎಲ್ಲರ ನಂಬಿಕೆಗಳನ್ನು ಹುಸಿಗೊಳಿಸದೆ ನ್ಯಾಯ ಪರತೆಯಿಂದ ಎಲ್ಲರೂ ಕಾರ್ಯ ನಿರ್ವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.