ಬ್ರಹ್ಮಾವರ : ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಜಿ.ಎಂ. ಗ್ಲೋಬಲ್ ಸ್ಕೂಲ್ ಬ್ರಹ್ಮಾವರ ಹಾಗೂ ಚೇರ್ಕಾಡಿ ಅಥ್ಲೆಟಿಕ್ಸ್ ಫಿಟ್ನೆಸ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟ–2025 ಡಿಸೆಂಬರ್ 28ರಂದು ಜಿ.ಎಂ. ಅರೆನಾದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಕ್ರೀಡಾಕೂಟವನ್ನು ಉದ್ಘಾಟಿಸಿ, ದೈಹಿಕ ಮತ್ತು ಕ್ರೀಡಾ ಚಟುವಟಿಕೆಗಳು ಆರೋಗ್ಯ ಹಾಗೂ ಶರೀರದ ದೃಢತೆಗೆ ಅಗತ್ಯವಾಗಿವೆ ಎಂದರು. ಸಮರ್ಥ ಕ್ರೀಡಾಪಟುವಿಗೆ ಕೌಶಲ, ತಂತ್ರ ಮತ್ತು ಯುಕ್ತಿ ಅವಶ್ಯಕವೆಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಪೋಷಕರ ಸಹಭಾಗಿತ್ವವನ್ನು ಶ್ಲಾಘಿಸಿದರು.
ಚೇರ್ಕಾಡಿ ಅಥ್ಲೆಟಿಕ್ಸ್ ಫಿಟ್ನೆಸ್ ಸೆಂಟರ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಜಾರ್ಜ್ ಕುರಿಯನ್, ಜಿ.ಎಂ. ಗ್ಲೋಬಲ್ ಸ್ಕೂಲ್ ಆಡಳಿತ ನಿರ್ದೇಶಕ ಪ್ರಣವ್ ಶೆಟ್ಟಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


