ಬೈಂದೂರು: ಸದಾ ವಿಭಿನ್ನ ಚಿಂತನೆಗಳ ಮೂಲಕ ಸುದ್ಧಿಯಾಗುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಈ ಬಾರಿ ತಮ್ಮ ಜನ್ಮದಿನವನ್ನು ಸೈನಿಕರೊಂದಿಗೆ ಆಚರಿಸಿಕೊಳ್ಳುವ ಮೂಲಕ ಸ್ಮರಣೀಯವಾಗಿರಿಸಿಕೊಂಡಿದ್ದಾರೆ. ಜನ್ಮದಿನವನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ಗಡಿಯಲ್ಲಿ ದೇಶ ಕಾಯುತ್ತಿರುವ ಬೈಂದೂರಿನ ಹೆಮ್ಮೆಯ ಸೈನಿಕರ ಮನೆಯ ಸದಸ್ಯರು ಹಾಗೂ ದೇಶ ರಕ್ಷಣೆಯ ಸೇವೆ ಮಾಡಿ ನಿವೃತ್ತಿ ಹೊಂದಿರುವ ಸೈನಿಕರ ಮನೆಗಳಿಗೆ ತೆರಳಿ ಅವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಿದರು. ಬೈಂದೂರು ತಾಲ್ಲೂಕಿನ ನಿವೃತ್ತ ವಾಯು ಸೇನಾಧಿಕಾರಿ ಟಿ. ದಿನಕರ್ ಶಾನುಭೋಗ್ ಹಾಗೂ ನಿವೃತ್ತ ಜೆಸಿಒ ರತ್ನಾಕರ ಬೈಂದೂರು ಅವರನ್ನು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ಮಾಡಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಎಲ್ಲರಿಗೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಯೋಗ ಮತ್ತು ಅವಕಾಶ ಲಭಿಸುವುದಿಲ್ಲ, ನಾವು ಸೈನಿಕರನ್ನು ಸೈನಿಕ ಕುಟುಂಬವನ್ನು ಗೌರವಿಸುವ ಮೂಲಕವೂ ದೇಶಪ್ರೇಮ ಮೆರೆಯಬಹುದು, ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮದಲ್ಲೂ ಸೈನಿಕರನ್ನು ಗೌರವಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಬೈಂದೂರು ಕ್ಷೇತ್ರದಾದ್ಯಂತ ಕಾರ್ಯಕರ್ತರೂ ಕೂಡಾ ಸೈನಿಕರನ್ನು, ಸೈನಿಕ ಕುಟುಂಬವನ್ನು ಗೌರವಿಸುವ ಮೂಲಕ ಶಾಸಕ ಗಂಟಿಹೊಳೆ ಅವರ ಜನ್ಮದಿನವನ್ನು ಆಚರಿಸಿದ್ದು ವಿಶೇಷವಾಗಿತ್ತು.