ಉಡುಪಿ: ಜನಪ್ರತಿನಿಧಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯಿಸುವಂತೆ ಶಾಸಕ ಯಶ್ಪಾಲ್ ಸುವರ್ಣ ಸಹಿತ ಸದಸ್ಯರೆಲ್ಲರು ಆಗ್ರಹಿಸಿದ ಘಟನೆ ನಗರಸಭೆ ಸಭಾಂಗಣದಲ್ಲಿ ನಡೆದಿದೆ. ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಆಗ್ರಹ ಕೇಳಿ ಬಂದಿದೆ
ಈ ಕುರಿತು ಸದಸ್ಯೆ ಕಲ್ಪನಾ ಸುಧಾಮ ಮಾತನಾಡಿ, ನಗರಸಭೆಯ ವಿರುದ್ಧವಾಗಿ ಮಣ್ಣಪಳ್ಳದ ಅಭಿವೃದ್ಧಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಬಾರದು. ಕೊಳಚೆ ನೀರು ಸಹಿತ ಸಾಕಷ್ಟು ಸಮಸ್ಯೆಗಳು ಆ ಭಾಗದಲ್ಲಿದ್ದರೂ ಅದಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ನಗರಸಭೆ ಸದಸ್ಯೆ ಎಂದು ನೋಡದೆ ದುರ್ವರ್ತನೆ ತೋರಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಸುವ್ಯವಸ್ಥೆಗೆ ಗಮನಹರಿಸುವುದು ಬಿಟ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ನಮ್ಮಿಂದ ವಿವರಣೆ ಕೇಳುವುದು ತರವಲ್ಲ. ಸಾಧ್ಯವಿದ್ದರೆ ಮಣ್ಣಪಳ್ಳ ಸಹಿತ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು. ಈ ಬಗ್ಗೆ ಜನಪ್ರತಿನಿಧಿಗಳೆಲ್ಲರೂ ಸೇರಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕೆಂದು ಅಧ್ಯಕ್ಷರು ಸೂಚಿಸಿದರು. ಮಣ್ಣಪಳ್ಳವನ್ನು ಜಿಲ್ಲಾಡಳಿತದ ಮೂಲಕ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು, ಇದು ನಗರಸಭೆಯ ಮೂಲಕವೇ ಆಗಬೇಕೆಂದು ಸದಸ್ಯರು ಆಗ್ರಹಿಸಿದರು.
ಉಡುಪಿ ನಗರಭಾಗದಲ್ಲಿ 561 ವಿವಿಧ ರೀತಿಯ ಜಾಹೀರಾತು ಫಲಕಗಳಿದ್ದು, ಈ ಮೂಲಕ ನಗರಸಭೆಗೆ ವಾರ್ಷಿಕ 26 ಲ.ರೂ.ಆದಾಯ ಬರುತ್ತಿಿರುವುದಾಗಿ ಅಧಿಕಾರಿಗಳು ಸಭೆಗೆ ತಿಳಿಸಿದರು. ದಾಖಲೆಗಳ ಪ್ರಕಾರ 561. ಆದರೆ ಅದಕ್ಕಿಂತಲೂ ಅಧಿಕ ಜಾಹೀರಾತು ಫಲಕಗಳಿವೆ ಇದನ್ನು ಗುರುತಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆಗೆ ನಿರ್ಧರಿಸಲಾಯಿತು. ಸದಸ್ಯ ಗಿರೀಶ್ ಅಂಚನ್ ಮಾತನಾಡಿ ಮಂಗಳೂರಿನಲ್ಲಿ ಪ್ರತೀ ತಿಂಗಳು ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಉಡುಪಿ ನಗರದಲ್ಲಿಯೂ ಅನುಷ್ಠಾನಗೊಳ್ಳಬೇಕು. ಇತ್ತೀಚೆಗೆ ನಗರದಲ್ಲಿ ಬೀಸಿದ ಭಾರೀ ಗಾಳಿಗೆ ಹಲವಾರು ಫಲಕಗಳು ನೆಲಕ್ಕುರುಳಿದ್ದು, ಜೀವಹಾನಿಯಾಗುವ ಸಂಭವವೂ ಇದೆ. ಈ ನಿಟ್ಟಿನಲ್ಲಿ ಹಳೆಯದಾದ ಹಾಗೂ ತುಕ್ಕು ಹಿಡಿದ ಫಲಕಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯಕ್ಕೆ ನಗರಸಭೆ ಕೂಡಲೇ ಮುಂದಾಗಬೇಕು ಎಂದರು.
ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಕೆಲವೊಂದು ಡಿವೈಡರ್ಗಳಲ್ಲಿ ಹಾಕಿರುವ ಫಲಕಗಳು ಹಿತ್ತುಹೋಗಿದ್ದು, ಒಳಗಿರುವ ಟ್ಯೂಬ್ಲೈಟ್ಗಳು ಎದ್ದು ಕಾಣುತ್ತಿವೆ. ಗಾಳಿ ಮಳೆಗೆ ಬೀಳುವ ಸ್ಥಿತಿಯಲ್ಲಿದೆ ಎಂದರು. 15 ನೇ ಹಣಕಾಸು ನಿಧಿಯ ಮೂಲಕ ಕಿನ್ನಿಮೂಲ್ಕಿ ವಾರ್ಡ್ನಲ್ಲಿರುವ ಕೆರೆಗಳನ್ನು ಅಭಿವೃದ್ಧಿಗೊಳಿಸಬೇಕು ಎಂದರು. ಈಗಾಗಲೇ ನಗರದ ವಿವಿಧ ಭಾಗದಲ್ಲಿ ಸಣ್ಣ ಸಣ್ಣ ತೋಡುಗಳಲ್ಲಿರುವ ಹೂಳನ್ನು ತೆಗೆಯುವ ಕೆಲಸ ನಡೆಯುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು. ರಜಾದಿನಗಳಲ್ಲಿ ಜನರು ಹಾಗೂ ಜನಪ್ರತಿನಿಧಿಗಳ ಕರೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಕೆಲಸ ಕಾರ್ಯಗಳೆಲ್ಲ ಬಾಕಿ ಉಳಿದಿವೆ. ಆದರೆ ಅಧಿಕಾರಿಗಳು ರಜೆಯಲ್ಲಿ ತೆರಳಿದರೆ ಸಮಸ್ಯೆಯಾಗಲಿದೆ ಎಂದರು. ರಜೆ ಇದ್ದರೂ ಕರೆಗೆ ಸ್ಪಂದಿಸಬೇಕು ಹಾಗೂ ಕೇಂದ್ರಭಾಗದಲ್ಲಿಯೇ ಇರುವಂತೆ ಅಧಿಕಾರಿಗಳಿಗೆ ಪೌರಾಯುಕ್ತ ಡಾ.ಉದಯ ಶೆಟ್ಟಿ ತಿಳಿಸಿದರು.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲದ ಸಿದ್ಧತೆ ಇನ್ನು ಕೂಡ ಆರಂಭಗೊಳ್ಳದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ರಾಜಕಾಲುವೆಗಳಲ್ಲಿ ಹೂಳು ಶೇಖರಣೆಯಾಗಿದ್ದು, ತ್ವರಿತಗತಿಯಲ್ಲಿ ತೆರವುಗೊಳಿಸಬೇಕು. ವಿವಿಧ ಭಾಗದಲ್ಲಿರುವ ಅಪಾಯಕಾರಿ ಮರಗಳು ಸಹಿತ ಬೃಹತ್ ತೋಡುಗಳಲ್ಲಿ ಶೇಖರಣೆಯಾಗಿರುವ ತ್ಯಾಾಜ್ಯಗಳನ್ನು ತೆಗೆಯಬೇಕು. ಅಪಾಯಕಾರಿ ಮರಗಳ ತೆರವಿಗೆ 6 ತಿಂಗಳು ಒಂದು ವರ್ಷ ಎಂದು ಕಾಯದೆ ತ್ವರಿತಗತಿಯಲ್ಲಿ ತೆರವು ಮಾಡಬೇಕು. ಮಳೆಗಾಲಕ್ಕೂ ಮುನ್ನ ಚರಂಡಿಗಳಲ್ಲಿರುವ ಹೂಳು ತೆಗೆಯುವುದು, ಅಪಾಯಕಾರಿ ಮರಗಳ ತೆರವಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯರಾದ ರಮೇಶ್ ಕಾಂಚನ್ ಹಾಗೂ ಅಮೃತಾ ಕೃಷ್ಣಮೂರ್ತಿ ಆಗ್ರಹಿಸಿದರು. ಮಣಿಪಾಲ ಭಾಗದಲ್ಲಿ ಎಲ್ಲೆಂದರಲ್ಲಿ ತ್ಯಾಾಜ್ಯನೀರು ಹರಿಯಬಿಡಲಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳವುದು. ಬೀದಿದೀಪಗಳ ನಿರ್ವಹಣೆಗೆ ವಿಶೇಷ ಒತ್ತು ನೀಡುವುದು. ಬೀಡಿನಗುಡ್ಡೆ ರಂಗಮಂದಿರ ಅಭಿವೃದ್ಧಿಪಡಿಸುವುದು.
ಮಠದಬೆಟ್ಟು ಬಳಿ ಶಾಶ್ವತತಡೆಗೋಡೆ ನಿರ್ಮಿಸುವುದು. ಶಾರದಾ ವೆಟ್ವೆಲ್ ಅನ್ನು ಮೇಲ್ದರ್ಜೆಗೇರಿಸುವುದು. ಮೊಬೈಲ್ ಟವರ್ಗಳು ನಗರಸಭೆಗೆ ತೆರಿಗೆ ಪಾವತಿಸುವುದು. ಮಣಿಪಾಲದ ಕೈಗಾರಿಕಾ ವಲಯದ ಚರಂಡಿಯ ತ್ಯಾಜ್ಯ ತೆಗೆಯಲು ಸಣ್ಣ ಜೆಸಿಬಿ ಯಂತ್ರ ಒದಗಿಸುವುದು. ಬಜೆಯಿಂದ ಪೂರೈಕೆಯಾಗುತ್ತಿರುವ ನೀರು ಎಲ್ಲೆಂದರಲ್ಲಿ ಪೋಲಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸದಸ್ಯ ವಿಜಯ ಕೊಡವೂರು ಆಗ್ರಹಿಸಿದರು. ಮನೆಬಿದ್ದರೆ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ 5 ಲ.ರೂ.ಪರಿಹಾರ ನೀಡಲಾಗುತ್ತಿತ್ತು. ಆದರೆ ಈಗ 1.20 ಲ.ರೂ.ಮಾತ್ರ ನೀಡಲಾಗುತ್ತಿದೆ. ವಿವಿಧ ವಸತಿ ಯೋಜನೆಗಳಿಗೆ ಅನುದಾನ ಬರುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸದಸ್ಯೆ ಸುಮಿತ್ರಾ ನಾಯಕ್ ತಿಳಿಸಿದರು. ನಗರಸಭೆ ವ್ಯಾಪ್ತಿಯ 10 ಜಂಕ್ಷನ್ಗಳಲ್ಲಿ ಸಂಚಾರ ದಟ್ಟನೆ ನಿಯಂತ್ರಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಸಿಟಿವಿ ಅಳವಡಿಸಲು 27 ಲ.ರೂ.ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳು ಸ್ಥಳ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಅವರು ನಗರಸಭೆ ಸದಸ್ಯೆ ಎಂದು ನೋಡದೆ ದುರ್ವರ್ತನೆ ತೋರಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು. ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಸುವ್ಯವಸ್ಥೆಗೆ ಗಮನಹರಿಸುವುದು ಬಿಟ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ನಮ್ಮಿಂದ ವಿವರಣೆ ಕೇಳುವುದು ತರವಲ್ಲ. ಸಾಧ್ಯವಿದ್ದರೆ ಮಣ್ಣಪಳ್ಳ ಸಹಿತ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲಿ.
ಕಲ್ಪನಾ ಸುಧಾಮ (ನಗರಸಭಾ ಸದಸ್ಯೆ)