ಉಡುಪಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಮಾನಿಸಿ ಕುಂದಾಪುರದ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶೆ ರೋಹಿಣಿ.ಡಿ ಆದೇಶಿಸಿದ್ದಾರೆ.
ಪ್ರಕರಣ ವಿವರ: ಕುಂದಾಪುರದ ಮಣಿಕಂಠ ಎಂಬವರಿಂದ ಪರಿಚಯಸ್ಥರಾದ ಆಲ್ವಿನ್ ಪೌಲ್ ಅವರು ತಮ್ಮ ವ್ಯವಹಾರಕ್ಕೆ ಸಂಬಂಧಿಸಿ ₹ 4.70 ಲಕ್ಷ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಆಲ್ವಿನ್ ಚೆಕ್ ನೀಡಿದ್ದರು. ಈ ಚೆಕ್ ಅನ್ನು ಬ್ಯಾಂಕಿಗೆ ಹಾಜರುಪಡಿಸಿದಾಗ ಅಮಾನ್ಯಗೊಂಡಿದೆ ಎಂದು ಆರೋಪಿಸಿ ವಕೀಲರ ಮೂಲಕ ಕುಂದಾಪುರ ನ್ಯಾಯಾಲಯದಲ್ಲಿ ಮಣಿಕಂಠ ದಾವೆ ಹೂಡಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ದೂರುದಾರರಿಗೆ ಚೆಕ್ಕನ್ನು ಆರೋಪಿ ನೀಡಿದ್ದಾರೆ ಎಂಬುದಕ್ಕೆ ಪೂರಕ ದಾಖಲೆಗಳು ಸಾಬೀತುಪಡಿಸಲು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಆರೋಪಿಯ ಪರವಾಗಿ ಉಡುಪಿಯ ನ್ಯಾಯವಾದಿ ಚೇರ್ಕಾಡಿ ಅಖಿಲ್. ಬಿ.ಹೆಗ್ಡೆ ವಾದಿಸಿದ್ದಾರೆ.