ಉಡುಪಿ: ಗ್ರಾ.ಪಂಗಳ ಅಧಿಕಾರದ ಉಳಿವಿಗಾಗಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗು ಗ್ರಾ.ಪಂ ಹಕ್ಕೊತ್ತಾಯ ಆಂದೋಲನದ ವತಿಯಿಂದ ಜಂಟಿಯಾಗಿ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು ಮಾ.4 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯಿದೆಯ ಅನ್ವಯ ಗ್ರಾಮ ಪಂಚಾಯತ್ ಸ್ಥಳೀಯ ಸ್ವಯಂಸರ್ಕಾರವಾಗಿದೆ. ಆದರೆ ಪ್ರಸ್ತುತ ವಿವಿಧ ಹಂತದಲ್ಲಿ ಅಧಿಕಾರಶಾಹಿ ಆಡಳಿತ ವ್ಯವಸ್ಥೆಯಿಂದಾಗಿ ಗ್ರಾ.ಪಂಗಳು ಸ್ಥಳೀಯ ಸ್ವಯಂ ಸರ್ಕಾರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಗ್ರಾ.ಪಂಗಳು ವಿವಿಧ ಹಂತದ ಸರ್ಕಾರಗಳ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸದೇ, ಸಂವಿಧಾನದ ಆಶಯ ಹಾಗೂ ‘ಕಾಯಿದೆಯ ಆಶಯದಂತೆ ಸ್ಥಳೀಯ ಸ್ವಯಂ ಸರ್ಕಾರವಾಗಿ ಉಳಿಯಬೇಕಾದರೆ ಎಲ್ಲರ ಒಕ್ಕೊರಲ ಧ್ವನಿ, ಹೋರಾಟ ಅತ್ಯಗತ್ಯವಾಗಿದೆ ಎಂದರು.
ಗ್ರಾ.ಪಂಗಳಲ್ಲಿ 2017 ರಿಂದ ಹೊಸ ಹುದ್ದೆಗಾಗಲೀ ಅಥವಾ ತೆರವಾದ ಸ್ಥಾನಕ್ಕೆ ಯಾವುದೇ ಸಿಬ್ಬಂದಿಗಳ ನೇಮಕವಾಗಿಲ್ಲ. ಇದರಿಂದ ಪಂಚಾಯತ್ ಆಡಳಿತಕ್ಕೆ ತೊಂದರೆ ಆಗುತ್ತಿದೆ. 25 ಸೆಂಟ್ಸ್ ವಿಸ್ತೀರ್ಣದವರೆಗಿನ ಜಮೀನಿಗೆ ಏಕ ನಿವೇಶನ ( ಸಿಂಗಲ್ ಲೇ ಔಟ್) ನಕ್ಷೆ/ ವಿನ್ಯಾಸಗಳಿಗೆ ಮೊದಲಿನಂತೆ ಅನುಮೋದನೆ ನೀಡುವ ಅಧಿಕಾರವು ಗ್ರಾ.ಪಂ ಗೆ ಇರಬೇಕು, ಅಧ್ಯಕ್ಷರು ಹಾಗು ಆರೋಗ್ಯ ಸಹಾಯಕ/ವೈದ್ಯಾಧಿಕಾರಿ ಸಹಿ ಹಣಕಾಸು ನಿರ್ವಹಣೆಗೆ ಕಡ್ಡಾಯ ಆದೇಶವನ್ನು ನೀಡಬೇಕು ಎಂದು ಒತ್ತಾಯಿಸಿದರು.
ನರೇಗಾ ಯೋಜನೆಯಲ್ಲಿ ವರ್ಷವೊಂದರಲ್ಲಿ 10 ಸಾವಿರ ಮಾನವ ದಿನ ಸೃಜಿಸಿದರೇ ನರೇಗಾ ಕೆಲಸಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬಹುದು ಎಂದಿದೆ. ಆದರೆ 10 ಸಾವಿರಕ್ಕಿಂತ ಜಾಸ್ತಿ ಸೃಜಿಸಿ, ಕಾಮಗಾರಿ ನಡೆಸಿದರೂ ಅನೇಕ ಪಂಚಾಯತ್ಗಳಲ್ಲಿ ಪ್ರತ್ಯೇಕ ನರೇಗಾ ಸಿಬ್ಬಂದಿ ನೀಡಿಲ್ಲ. 10 ಸಾವಿರ ಮಾನವ ದಿನಗಳನ್ನು ಸೃಜಿಸಿದ ಗ್ರಾ.ಪಂಗಳಿಗೆ ನರೇಗಾ ಕೆಲಸಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಿಬ್ಬಂದಿ ನೇಮಕ ಪ್ರಕ್ರಿಯೆ ತುರ್ತಾಗಿ ಆಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್.ಜನಾರ್ದನ್ ಮರವಂತೆ, ಬೈಂದೂರು ವಲಯ ಅಧ್ಯಕ್ಷ ಪ್ರದೀಪ್ ಕೊಟ್ಟಾರಿ ಹಳ್ಳಿಹೊಳೆ, ಕುಂದಾಪುರ ವಲಯ ಅಧ್ಯಕ್ಷ ರಮೇಶ್ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ್ ಗಾಣಿಗ ಉಪಸ್ಥಿತರಿದ್ದರು.