ಉಡುಪಿ : ಕಾನೂನು ಸುವ್ಯವಸ್ಥೆ, ಬಂದೋಬಸ್ತ್, ಚುನಾವಣೆ, ಪ್ರಾಕೃತಿಕ ವಿಕೋಪದಂಥ ಸಂದರ್ಭಗಳಲ್ಲಿ ಪೊಲೀಸ್ ಹಾಗೂ ಇತರ ಇಲಾಖೆಗಳೊಂದಿಗೆ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕರ ಸೇವೆ ಸಮಾಜಮುಖಿಯಾಗಿರಬೇಕು ಎಂದು ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರಾದ ಡಾ.ರೋಶನ್ಕುಮಾರ ಶೆಟ್ಟಿ ಅವರು ಹೇಳಿದರು.

ಅವರು ಸೋಮವಾರ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ, ಪ್ರಸಕ್ತ ಸಾಲಿನಲ್ಲಿ ಉಡುಪಿ ಜಿಲ್ಲಾ ಗೃಹರಕ್ಷಕದಳದಲ್ಲಿ ನೂತನವಾಗಿ ನೋಂದಾಯಿಸಲ್ಪಟ್ಟ ಗೃಹರಕ್ಷಕರಿಗೆ ನಡೆದ ವಾರ್ಷಿಕ ಮೂಲ ಬುನಾದಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಮಾತನಾಡಿ, ಪ್ರತಿಯೊಂದು ರಕ್ಷಣಾ ಇಲಾಖೆಗಳ ಸಿಬ್ಬಂದಿಗಳು ಧರಿಸುವ ಸಮವಸ್ತ್ರಕ್ಕೂ ಗೌರವವಿದೆ. ಈ ಗೌರವಕ್ಕೆ ಚ್ಯುತಿ ಬಾರದಂತೆ ಸೇವೆ ಸಲ್ಲಿಸುವ ಬದ್ಧತೆಯನ್ನು ಸಿಬ್ಬಂದಿಗಳು ಇರಿಸಿಕೊಳ್ಳಬೇಕು. ತರಬೇತಿಗಳು ವೃತ್ತಿಪರರನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಕರ್ತವ್ಯದ ಅವಧಿಯ ಪ್ರತಿ ಕ್ಷಣವೂ, ನಮಗೆ ಹೊಸ ತರಬೇತಿಯನ್ನು ಪಡೆದುಕೊಂಡಂತೆ ಎನ್ನುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.

ಮುಖ್ಯ ತರಬೇತುದಾರರಾದ ಚಿತ್ರದುರ್ಗದ ಹಿರಿಯ ಬೋಧಕ ಹೆಚ್.ತಿಪ್ಪೇಸ್ವಾಮಿ, ಘಟಕಾಧಿಕಾರಿಗಳಾದ ಸ್ಟೀವನ್ ಪ್ರಕಾಶ್ ಬ್ರಹ್ಮಾವರ, ಕುಮಾರ್ ಉಡುಪಿ, ಉತ್ತಮ ಶಿಬಿರಾರ್ಥಿಗಳಾದ ಸ್ನೇಹ ಜೆ ಪೆಟ್ಲೂರ್ ಕುಂದಾಪುರ ಹಾಗೂ ಭೂಷಣ್ ಕಾಪು ಅವರನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳ ಪರವಾಗಿ ಸುದೀಪ್ ಹಾಗೂ ಶಹನಾಝ್ ಅನಿಸಿಕೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಚೇರಿ ಅಧೀಕ್ಷಕ ರತ್ನಾಕರ್ ಬೈಂದೂರು ಹಾಗೂ ಪ್ರಥಮ ದರ್ಜೆ ಸಹಾಯಕಿ ಟಿ.ಎಸ್.ಅನಿತಾ ಉಪಸ್ಥಿತರಿದ್ದರು. ಗೃಹರಕ್ಷಕ ಭೂಷಣ ಸ್ವಾಗತಿಸಿ, ಸ್ನೇಹ ಜೆ ಪೆಟ್ಲೂರ್ ನಿರೂಪಿಸಿ, ದೀಪಿಕಾ ಬ್ರಹ್ಮಾವರ ವಂದಿಸಿದರು.