ಉಡುಪಿ: ಪ್ರಪಂಚದಲ್ಲಿ ಮನುಷ್ಯನನ್ನು ಹೊರತು ಪಡಿಸಿ ಯಾವುದೇ ಜೀವರಾಶಿಗಳು ಪ್ರಕೃತಿಗೆ ವಿರುದ್ದವಾಗಿಲ್ಲ. ಹೀಗಾಗಿ ಮನುಷ್ಯ ಪ್ರಕೃತಿಗೆ ಪೂರಕವಾಗಿಲ್ಲದ ಕಾರಣ ಅನಾರೋಗ್ಯಗಳು ಬಾಧಿಸುತ್ತಿವೆ ಎಂದು ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥರು ಹೇಳಿದರು. ಅವರು, ಆತ್ರಾಡಿ ಒಂತಿಬೇಟ್ಟುವಿನ ಮದಗದಲ್ಲಿ ಗಾಂಧಿ ಆಸ್ಪತ್ರೆ ಮೂವತ್ತನೇ ವಾರ್ಷಿಕೋತ್ಸವ ಹಾಗೂ ಪಂಚಮಿ ಟ್ರಸ್ಟ್ ರಜತ ಸಂಭ್ರಮಾಚಾರಣೆ ಉದ್ಘಾಟಿಸಿ ಮಾತನಾಡಿದರು. ಮಾನಸಿಕ ಮತ್ತು ದೈಹಿಕ ಅಸ್ವಾಸ್ತ್ಯ ಅತಿಶಯ ದುರಾಸೆ ಫಲ. ಪಡೆದುಕೊಳ್ಳುವ ಭರದಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವೈದ್ಯರ ಸಹಾಯದಿಂದ ಬದುಕು ದೀರ್ಘ ಗೊಳಿಸಲು ಪ್ರಯತ್ನ ಸಾಗುತ್ತಿದೆ ಎಂದರು. ಮನುಷ್ಯನ ಬದುಕು ಅಮೂಲ್ಯ. ಆದರೆ ಜನ್ಮಾನಂತರ ಕರ್ಮ ಫಲವಾಗಿ ಬದುಕಿನಲ್ಲಿ ಕಷ್ಟ ಸುಖ ಪ್ರಾಪ್ತಿಯಾಗುತ್ತವೆ. ಅದೆಲ್ಲವನ್ನು ದಾಟಿ ಸುಖಮಯ ಬದುಕಿಗೆ ಪ್ರಯತ್ನ ನಿರಂತರವಾಗಿರುತ್ತದೆ ಎಂದವರು ನುಡಿದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರೀಶ್ಚಂದ್ರ ಪ್ರಾಸ್ತವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ, ಶಾಸಕ ಯಶ್ಪಾಲ್ ಸುವರ್ಣ, ಮನೋವೈದ್ಯರಾದ ಡಾ. ಪಿ,. ವಿ. ಭಂಡಾರಿ, ಉದ್ಯಮಿ ಎನ್. ಅಚ್ಚುತ ಹೊಳ್ಳ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾತಂತ್ರಿ ಉಪಸ್ಥಿತರಿದ್ದರು. ಶ್ವೇತಾ ತಂತ್ರಿ ಪ್ರಾರ್ಥಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ಕೊಳಲು ಗುರು ಬನ್ನಂಜೆ ರಾಘವೇಂದ್ರ ರಾವ್ ಮತ್ತು ರವಿ ಕುಳೂರ್ ಶಿಷ್ಯರಾದ ಬಾಲ ಕಲಾವಿದರಿಂದ ಕೊಳಲು ವಾದನ ನಡೆಯಿತು. ಸಭಾ ಕಾರ್ಯ ಕ್ರಮದ ಬಳಿಕ ಹೆಸರಾಂತ ವಯೋಲಿನ್ ವಾದಕಿ ಗುರುವಾಯುರಿನ ಕುಮಾರಿ ಗಂಗಾ ಶಶಿಧರನ್ ಅವರ ಕಚೇರಿ ನಡೆಯಿತು.