ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್.ಎಲ್.ಆರ್.ಎಂ. ಒಣ ತ್ಯಾಜ್ಯ ಘಟಕದಲ್ಲಿ ಭಾನುವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳು ಹಾನಿಗೊಳಗಾದ ಘಟನೆ ನಡೆದಿದೆ.

ಪಂಚಾಯತ್ ಕಟ್ಟಡದ ಕೆಳಭಾಗದಲ್ಲಿ ವಾಣಿಜ್ಯ ಸಂಕೀರ್ಣವಿದ್ದು, ಮೇಲ್ಭಾಗದಲ್ಲಿ ಒಣ ತ್ಯಾಜ್ಯ ಸಂಗ್ರಹ ಘಟಕ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಶೇಖರಣೆ ಮಾಡಲಾಗಿದ್ದ ಒಣ ತ್ಯಾಜ್ಯಕ್ಕೆ ಏಕಾಏಕಿ ಬೆಂಕಿ ತಗುಲಿ ತ್ಯಾಜ್ಯ ಹಾಗೂ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.




ಬೆಂಕಿಯಿಂದ ವಾಣಿಜ್ಯ ಕಟ್ಟಡಕ್ಕೂ ಹಾನಿಯಾಗುವ ಸಾಧ್ಯತೆ ಇತ್ತು, ಮಾಹಿತಿ ಪಡೆದ ತಕ್ಷಣ ಬೈಂದೂರು ಮತ್ತು ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.



