ಉಡುಪಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ದುಬಾರಿ ಮೊಬೈಲ್ ಫೋನ್ ಹಾಗೂ ನಗದು ಹಣವನ್ನು ಪೊಲೀಸರ ಸಮ್ಮುಖದಲ್ಲಿ ಕಳೆದುಕೊಂಡವರಿಗೆ ಮರಳಿಸಿ ನೀಡುವ ಮೂಲಕ ನಾಗರಿಕರು ಅಪರೂಪದ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ ಘಟನೆ ಒಂದೇ ದಿನದಲ್ಲಿ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೊದಲ ಘಟನೆಯಲ್ಲಿ, ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ ಸುಮಾರು 15 ಸಾವಿರ ರೂ. ನಗದು ಇದ್ದ ಬ್ಯಾಗನ್ನು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ರವಾಸಿಗರೊಬ್ಬರು ಪತ್ತೆಹಚ್ಚಿ ಠಾಣೆಗೆ ತಂದು ಒಪ್ಪಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಕೇರಳದ ಕೊಲ್ಲಂ ಪೊಲೀಸ್ ಠಾಣೆಯ ಸಿಬ್ಬಂದಿ ಅಭಿಷೇಕ್ ಅವರ ಪತ್ನಿಗೆ ಸೇರಿದ ಸುಮಾರು 3 ಸಾವಿರ ರೂ. ನಗದು ಮತ್ತು ಐಫೋನ್ ಮೊಬೈಲ್ ಹೊಂದಿದ್ದ ಬ್ಯಾಗನ್ನು ಕೊಡಚಾದ್ರಿಗೆ ಸಂಚರಿಸುತ್ತಿದ್ದ ಜೀಪ್ ಚಾಲಕ ಮುದೂರಿನ ಶರತ್ ಅವರು ಪತ್ತೆಹಚ್ಚಿ ಠಾಣೆಗೆ ಹಸ್ತಾಂತರಿಸಿದ್ದಾರೆ.

ಈ ಎರಡು ಪ್ರಕರಣಗಳಲ್ಲೂ ಪತ್ತೆಯಾದ ನಗ–ನಗದುಗಳನ್ನು ಕಳೆದುಕೊಂಡವರಿಗೆ ಕೊಲ್ಲೂರು ಪೊಲೀಸ್ ಠಾಣೆಯ ಮೂಲಕ ಅಧಿಕೃತವಾಗಿ ಹಸ್ತಾಂತರಿಸಲಾಗಿದ್ದು, ಪ್ರವಾಸಿಗ ಹಾಗೂ ಜೀಪ್ ಚಾಲಕರ ಪ್ರಾಮಾಣಿಕ ನಡೆಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



