ಉಡುಪಿ : ಭಾರತದ ಆಧ್ಯಾತ್ಮ ಮತ್ತು ಶ್ರೀಕೃಷ್ಣನ ಭಕ್ತಿಯಲ್ಲಿ ತೇಲಿದ ಯುರೋಪ್ನ ನರೋತ್ತಮ್ ದಾಸ್ ಹಾಗೂ ಫ್ರಾನ್ಸ್ನ ಜಾನ್ನವ್ ದಂಪತಿಗಳು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಸನ್ನಿಧಾನದಲ್ಲಿ ಸಂಪ್ರದಾಯಬದ್ಧ ಹಿಂದೂ ವಿಧಾನದಲ್ಲಿ ವಿವಾಹವಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಶ್ರೀಕೃಷ್ಣ ಭಕ್ತಿಯಲ್ಲಿ ತೊಡಗಿಸಿಕೊಂಡು ಮಥುರಾ ಮತ್ತು ಬೃಂದಾವನದಲ್ಲಿ ಸೇವೆ ಸಲ್ಲಿಸುತ್ತಿರುವ ಈ ಜೋಡಿ, ಪರಸ್ಪರದ ಭಕ್ತಿಭಾವದ ಮೂಲಕ ಪ್ರೇಮದ ಬಾಂಧವ್ಯಕ್ಕೆ ಒಳಗಾಗಿದ್ದು, ಅದನ್ನು ಮದುವೆಯ ಮೂಲಕ ಪಾವನಗೊಳಿಸಿದ್ದಾರೆ.

ಕೊಲ್ಲೂರಿನ ಪವಿತ್ರ ಪರ್ವತಶ್ರೇಣಿಗಳ ಮಧ್ಯದಲ್ಲಿ ನಡೆದ ಈ ವಿಶಿಷ್ಟ ವಿವಾಹದಲ್ಲಿ ಅರ್ಚವೇದಮಂತ್ರಗಳೊಂದಿಗೆ ಮಂತ್ರೋಚ್ಚಾರಣೆ ನಡೆಸಿ ಮದುವೆ ನೆರವೇರಿಸಿದರು.

ಸಾಂಪ್ರದಾಯಿಕ ಉಡುಗೆಯಲ್ಲಿ ವಿದೇಶಿ ವರವಧುಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಪರೂಪದ ವಿವಾಹದ ನಂತರ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸರಳ ಆರತಕ್ಷತೆ ಮತ್ತು ಭಕ್ತಿಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಯಿತು. ನರೋತ್ತಮ್ ದಾಸ್ ಮತ್ತು ಜಾನ್ನವ್ ತಮ್ಮ ವೃತ್ತಿಜೀವನವನ್ನು ತೊರೆದು ಈಗ ಮಥುರಾದ ಬೃಂದಾವನದಲ್ಲಿ ಶ್ರೀಕೃಷ್ಣ ಸೇವೆಯಲ್ಲಿ ನಿರತರಾಗಿದ್ದಾರೆ. ಇವರ ವಿವಾಹ ಭಾರತದ ಆಧ್ಯಾತ್ಮದ ಆಕರ್ಷಣೆಯು ಜಗತ್ತಿನ ಮೂಲೆಮೂಲೆಗೂ ವ್ಯಾಪಿಸಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.



