ಉಡುಪಿ: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ, ನ್ಯಾಯಧೀಶರೇ ಮಾಡಿಕೊಂಡಿರುವ ಕೊಲಿಜಿಯಂ ವ್ಯವಸ್ಥೆಗೆ ನನ್ನ ಧಿಕ್ಕಾರವಿದೆ. ಈ ವ್ಯವಸ್ಥೆಯ ಬದಲು ಸಂವಿಧಾನಬದ್ದವಾಗಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರಿಗೂ ಪ್ರಾತಿನಿಧ್ಯ ದೊರಕುವಂತೆ ನ್ಯಾಯಧೀಶರ ಆಯ್ಕೆ ಪ್ರಕ್ರಿಯೆ ನಡೆಯಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನ್ಯಾ| ನಾಗ್ಮೋಹನ್ ದಾಸ್ ಅಭಿಪ್ರಾಯಪಟ್ಟರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2022 ರಿಂದ 25 ರವರೆಗೆ ಸುಪ್ರೀಂಕೋರ್ಟ್ಗೆ ಆಯ್ಕೆಯಾದ 18 ನ್ಯಾಯಮೂರ್ತಿಗಳಲ್ಲಿ ಒಬ್ಬರೇ ಒಬ್ಬರು ಮಹಿಳೆಯರಿಲ್ಲ. ಈ ವ್ಯವಸ್ಥೆ ಬದಲಾಗಬೇಕು. ಸಾಮರ್ಥ್ಯ ಇಲ್ಲದೇ ಮಹಿಳೆಯರು ನ್ಯಾಯಮೂರ್ತಿಯಾಗಿ ಆಯ್ಕೆಯಾಗದೇ ಇರುವುದಲ್ಲ. ಅವರನ್ನು ಆಯ್ಕೆ ಮಾಡುವ ಮನಸ್ಥಿತಿ ಇಲ್ಲದೇ ಈ ರೀತಿ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಲಿಜಿಯಂ ವ್ಯವಸ್ಥೆಯಿಂದ ಸದ್ಬಳಕೆ ಹಾಗು ದುರ್ಬಳಕೆ ಆಗಿದೆ. ಆದರೆ ನ್ಯಾಯಧೀಶರ ಶಿಫಾರಸಿನ ಮೇಲೆ ಇತರ ಹೈಕೋರ್ಟ್ ಹಾಗು ಸುಪ್ರೀಂಕೋರ್ಟ್ನಲ್ಲಿ ನ್ಯಾಯಧೀಶರನ್ನು ಆಯ್ಕೆ ಮಾಡುವುದು ಎಷ್ಟು ಸರಿ. ಈ ವ್ಯವಸ್ಥೆಯಿಂದ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಧೀಶರಾಗಿರುವ ಪ್ರತಿಭಾವಂತರು ಹೈಕೋರ್ಟ್ ಹಾಗು ಸುಪ್ರೀಂಕೋರ್ಟಿನಲ್ಲಿ ನ್ಯಾಯಧೀಶರಾಗುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದರು.
ನ್ಯಾಯಧೀಶರ ಆಯ್ಕೆ ಪ್ರಕ್ರಿಯೆಯೂ ಒಂದೆರಡು ಪ್ರಾಂತಕ್ಕೆ ಸೀಮಿತವಾಗದೇ, ದೇಶವ್ಯಾಪಿ ಆಗಬೇಕು. ಹೀಗಾಗಬೇಕೆಂದರೇ ಸಂವಿಧಾನಬದ್ದವಾದ, ಸೂಕ್ತವಾಗಿ ಮಾರ್ಗದರ್ಶಿಯನ್ನು ಹೊಂದಿರುವ ವ್ಯವಸ್ಥೆ ಬರಬೇಕು ಎಂದರು. ಯುವಪೀಳಿಗೆ ಸೇರಿದಂತೆ ಸಾರ್ವಜನಿಕರಿಗೆ ಸಂವಿಧಾನದ ಮೌಲ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂವಿಧಾನ ಓದು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕಾಲೇಜ್ ವಿದ್ಯಾರ್ಥಿಗಳು, ಸಮಾಜಮುಖಿ ಸಂಘಟನೆಗಳೊಂದಿಗೆ ಸೇರಿಕೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
ಸಂವಿಧಾನ ಬದಲಾಯಿಸಲು ಅವಕಾಶವಿಲ್ಲ, ತಿದ್ದುಪಡಿ ಮಾಡಬಹುದು. ಇದರ ಬಗ್ಗೆ ಕೇಶವನಂದಭಾರತಿ v/s ಕೇರಳ ಸರಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದರು.