ಉಡುಪಿ ; ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ತಲವಾರಿನಿಂದ ಮಾರಣಾಂತಿಕ ಧಾಳಿ ನಡೆದ ಘಟನೆ ಕೊಪ್ಪಲದಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಜಗದೀಶ್ಚಂದ್ರ ಹೆಗ್ಡೆ (48) ಯನ್ನು ಪೊಲೀಸರು ಬಂದಿಸಿದ್ದಾರೆ, ಮುಖ್ಯ ಆರೋಪಿ ಮಂಜುನಂದ ಹೆಗ್ಡೆ (49) ಯನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಬಂಧಿಸಲಾಗಿದೆ.

ಶಿವರಾಜ್ ಅವರು ತಮ್ಮ ಬೈಕ್ನಲ್ಲಿ ಮನೆ ಕಡೆ ತೆರಳುತ್ತಿದ್ದಾಗ, ಆರೋಪಿ ಮಂಜುನಂದ ಹೆಗ್ಡೆ ಬೈಕ್ಗೆ ಅಡ್ಡ ಬಂದು ತಲವಾರಿನಿಂದ ತಲೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ದಾಳಿಯಿಂದ ಪಿರ್ಯಾದಿದಾರರು ಕೆಳಗೆ ಬಿದ್ದ ಬಳಿಕ, ಮಂಜುನಂದ ಹೆಗ್ಡೆ ಅವರು ಶಿವರಾಜ್ ಅವರ ಹೊಟ್ಟೆಯ ಎಡಭಾಗಕ್ಕೂ, ಭುಜದ ಕೆಳಭಾಗಕ್ಕೂ ತಲವಾರಿನಿಂದ ಮತ್ತೊಮ್ಮೆ ಹಲ್ಲೆ ನಡೆಸಿದರೆಂದು ಪೊಲೀಸ್ ಮಾಹಿತಿಯಂತೆ ತಿಳಿದು ಬಂದಿದೆ. ಘಟನೆಯ ಸಮಯದಲ್ಲಿ ಜಯಾನಂದ ಹೆಗ್ಡೆ, ಚಂದ್ರಹಾಸ ಹೆಗ್ಡೆ ಸೇರಿದಂತೆ ಇನ್ನೂ 7–8 ಜನರು ಸ್ಥಳದಲ್ಲಿ ಇದ್ದು ಹಲ್ಲೆಗೆ ಪ್ರಯತ್ನಿಸಿರುವುದಾಗಿ ಹಲ್ಲೆಗೆ ಒಳಗಾದ ಶಿವರಾಜ್ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇಬ್ಬರು ಆರೋಪಿಗಳಿಗೂ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.



