ಉಡುಪಿ : ಉಡುಪಿಯಲ್ಲಿ ಒಂದು ಅಪರೂಪದ ನಕ್ಸಲ್ ಶರಣಾಗತಿ ನಡೆಯಿತು. ಕಳೆದ ಒಂದು ದಶಕದಿಂದ ಮುಖ್ಯ ವಾಹಿನಿಯಲ್ಲಿ ಇದ್ದರೂ ಕರ್ನಾಟಕದಲ್ಲಿ ಕಾಣಿಸಿಕೊಳ್ಳದ ಉಡುಪಿ ಮೂಲದ ಲಕ್ಷ್ಮಿ ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾಳೆ. ಈಕೆಯ ಪತಿ ಸಂಜೀವ 2009ರಲ್ಲಿ ಆಂಧ್ರಪ್ರದೇಶ ಸರಕಾರದ ಮುಂದೆ ಶರಣಾದ ನಂತರ, ಲಕ್ಷ್ಮಿ ಕೂಡ ಸಹಜ ಕೌಟುಂಬಿಕ ಜೀವನ ನಡೆಸುತ್ತಿದ್ದರು. ಇದೀಗ ಕರ್ನಾಟಕ ರಾಜ್ಯದಲ್ಲಿ ಸರಂಡರ್ ಪ್ಯಾಕೇಜ್ ಘೋಷಣೆಯಾದ ವಿಚಾರ ತಿಳಿದು, ಸ್ವ ಇಚ್ಛೆಯಿಂದ ಉಡುಪಿ ಜಿಲ್ಲಾಡಳಿತದ ಮುಂದೆ ಬಂದು ಶರಣಾಗಿದ್ದಾಳೆ.

ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ, ಲಕ್ಷ್ಮೀ ಶರಣಾಗತಿಯ ಎಲ್ಲಾ ಸಿದ್ಧತೆ ನಡೆಸಿತ್ತು. ಬೆಂಗಳೂರಿಗೆ ಬಂದಿದ್ದ ಲಕ್ಷ್ಮಿಯನ್ನು ಕಾರ್ಕಳಕ್ಕೆ ಕರೆತಂದು, ಅಲ್ಲಿಂದ ನೇರವಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಬಂದು ಪ್ರಾರಂಭಿಕ ಪ್ರಕ್ರಿಯೆಗಳನ್ನು ನಡೆಸಲಾಯಿತು. ಮುಂದೆ ರಜತಾದ್ರಿಯಲ್ಲಿರುವ ಜಿಲ್ಲಾಡಳಿತ ಕಚೇರಿಗೆ ತೆರಳಿ, ಅಧಿಕೃತವಾಗಿ ಶರಣಾಗತಿ ಘೋಷಿಸಲಾಯಿತು. ಈವೇಳೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಈಕೆಯನ್ನು ಎ ಕೆಟಗರಿಯ ನಕ್ಸಲ್ ಎಂದು ಪರಿಗಣಿಸಿ, ಪರಿಹಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಲಕ್ಷ್ಮಿ ವಿರುದ್ಧ ಮೂರು ಪ್ರಕರಣಗಳಿವೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇನ್ನು ಲಕ್ಷ್ಮಿ ವಿರುದ್ಧ ಗಂಭೀರ ತೆರನಾದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದ ಪ್ರಕರಣ, ಹಲ್ಲೆ ಪ್ರಕರಣ ಹಾಗೂ ಕರಪತ್ರ ಅಂಟಿಸಿದ ಸಾಮಾನ್ಯ ಪ್ರಕರಣಗಳಷ್ಟೇ ಅಮಾವಾಸ್ಯೆ ಬೈಲು ಠಾಣೆಯಲ್ಲಿ ದಾಖಲಾಗಿದೆ. ಸುಲಭವಾಗಿ ಈ ಪ್ರಕರಣಗಳಿಂದ ಜಾಮೀನು ಪಡೆದು ಆರೋಪ ಮುಕ್ತ ಗೊಳ್ಳುವ ಸಾಧ್ಯತೆಗಳಿವೆ.

ಶರಣಾಗತಿ ಪ್ರಕ್ರಿಯೆ ಕುರಿತು ಮಾತನಾಡಿದ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸದಸ್ಯ ಶ್ರೀಪಾಲ್ , ಲಕ್ಷ್ಮಿ ಶರಣಾಗುವ ಮೂಲಕ ಕರ್ನಾಟಕ ರಾಜ್ಯದ ಮೂಲ ಹೊಂದಿರುವ ಎಲ್ಲಾ ನಕ್ಸಲರು ಶರಣಾಗತಿಯಾದಂತಾಗಿದೆ. ಶರಣಾಗತ ನಕ್ಸಲರಿಗೆ ಸೂಕ್ತ ಕಾನೂನು ನೆರವು ನೀಡುತ್ತೇವೆ. ಇವರಿಗೆ ಒಟ್ಟು 22 ಮಂದಿ ನಕ್ಸಲರು ರಾಜ್ಯದಲ್ಲಿ ಶರಣಾಗತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಕರಣಗಳ ಫಾಲೋ ಅಪ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಘೋಷಿಸಿದಂತೆ, ಕರ್ನಾಟಕ ಈಗ ನಕ್ಸಲ್ ಮುಕ್ತಗೊಂಡಿದೆ. ಸದ್ಯ ಪೊಲೀಸರು ಲಕ್ಷ್ಮಿಯನ್ನು ವಶಕ್ಕೆ ಪಡೆದು, ಆಕೆಯ ಆರೋಗ್ಯ ತಪಾಸಣೆ ಮೂಲಕ ಕಾನೂನು ಪ್ರಕ್ರಿಯೆ ಮುಂದುವರಿಸಿದ್ದಾರೆ. ವಿಕ್ರಂ ಗೌಡ ಹತ್ಯೆಯಾದ ನಂತರ, ಉಡುಪಿಯಿಂದ ನಕ್ಸಲ್ ಗುಂಪು ಸೇರಿದ ಲಕ್ಷ್ಮಿ ಶರಣಾಗತಿ ಯಾಗಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಜಿಲ್ಲೆಯಿಂದ ಕೆಂಪು ಹಾದಿ ಹಿಡಿದ ಎಲ್ಲರೂ ಆಡಳಿತ ವ್ಯವಸ್ಥೆಯ ಮುಂದೆ ಶರಣಾದಂತಾಗಿದೆ.
