ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಖಳನಟ ಹರೀಶ್ ರಾಯ್ (60) ಅವರು ಥೈರಾಯ್ಡ್ ಕ್ಯಾನ್ಸರ್ನಿಂದಾಗಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

1990ರ ದಶಕದಿಂದಲೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಹರೀಶ್ ರಾಯ್ ಅವರು ‘ಓಂ’, ‘ಕೆಜಿಎಫ್’, ತಾಯವ್ವ, ಜೋಡಿ ಹಕ್ಕಿ, ಅಂಡರ್ ವರ್ಲ್ಡ್, ಸಂಜು ವೆಡ್ಸ್ ಗೀತಾ, ಸ್ವಯಂವರ, ನಲ್ಲ, ಭೂಗತ ಮುಂತಾದ ಹಿಟ್ ಚಿತ್ರಗಳಲ್ಲಿ ಖಳಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು.

ಹರೀಶ್ ರಾಯ್ ಅವರು ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗೆ ಕೆಜಿಎಫ್ ಚಿತ್ರ ಹೀರೋ ಯಶ್ ಸೇರಿದಂತೆ ಹಲವಾರು ನಟರು ಹಾಗೂ ಅಭಿಮಾನಿಗಳು ಆರ್ಥಿಕ ಸಹಾಯ ಹಸ್ತ ಚಾಚಿದ್ದರು. ಆದಾಗ್ಯೂ, ಕಾಯಿಲೆ ತೀವ್ರಗೊಂಡ ಪರಿಣಾಮ ಮೃತರಾಗಿದ್ದಾರೆ.

ಉಡುಪಿ ಮೂಲದ ಹರೀಶ್ ರಾಯ್ ಅವರು ತಮ್ಮ ಯುವಕಾಲದಲ್ಲಿ ರೌಡಿಸಂ ಹಿನ್ನೆಲೆಯಿಂದ ಸಿನಿರಂಗ ಪ್ರವೇಶಿಸಿದ್ದರು. ನಟ-ನಿರ್ದೇಶಕ ಉಪೇಂದ್ರ ಅವರ ಸಹಾಯದಿಂದ ಚಲನಚಿತ್ರ ಕ್ಷೇತ್ರಕ್ಕೆ ಕಾಲಿಟ್ಟ ಅವರು, ತಮ್ಮ ವಿಭಿನ್ನ ಅಭಿನಯ ಶೈಲಿಯಿಂದ ಖಳನಟರಾಗಿ ಹೆಸರು ಮಾಡಿದರು. ಹರೀಶ್ ರಾಯ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗದಲ್ಲಿ ಶೋಕ ವ್ಯಕ್ತಪಡಿಸಿದೆ.



