ಉಡುಪಿ: ಶಿರ್ವಾ ಮಹಿಳಾ ಸೌಧದ ಆವರಣ ವೇದಿಕೆಯಲ್ಲಿ ಯಕ್ಷಶಿಕ್ಷಣ ಟ್ರಸ್ಟ್, ಪ್ರದರ್ಶನಾ ಸಂಘಟನಾ ಸಮಿತಿ ಶಿರ್ವಾ ಹಾಗೂ ಯಕ್ಷಗಾನ ಕಲಾರಂಗ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ‘ಕಿಶೋರ ಯಕ್ಷಗಾನ ಸಂಭ್ರಮ – 2025’ ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಕಾಪು ಕ್ಷೇತ್ರದ ಆರು ಶಾಲೆಗಳ ವಿದ್ಯಾರ್ಥಿಗಳಿಂದ ಪ್ರತಿದಿನ ಎರಡು ಯಕ್ಷಗಾನ ಪ್ರದರ್ಶನಗಳು ನಡೆಯಲಿದ್ದು, ಯಕ್ಷಗಾನದ ಮಹತ್ವವನ್ನು ವಿವರಿಸಿದ ಶಾಸಕ ಸುರೇಶ ಶೆಟ್ಟಿ, ಈ ಮಹಾಭಿಯಾನದ ಯಶಸ್ಸಿಗೆ ಯಕ್ಷಗಾನ ಕಲಾರಂಗದ ನಾಯಕತ್ವ ಮತ್ತು ಕಾರ್ಯಕರ್ತರ ನಿಸ್ವಾರ್ಥ ಶ್ರಮವೇ ಕಾರಣ ಎಂದು ಪ್ರಶಂಸೆ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಅಬ್ಬೆಟ್ಟುಗುತ್ತು ಸಾಯಿನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂ. ಗಂಗಾಧರ ರಾವ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ವಿಠಲ ಅಂಚನ್, ಡಾ. ಸ್ಫೂರ್ತಿ ಬಿ. ಶೆಟ್ಟಿ, ಗೋಪಾಲ ಗುರುಸ್ವಾಮಿ ವಿಶೇಷ ಅತಿಥಿಗಳಾಗಿ ಹಾಜರಿದ್ದರು. ಟ್ರಸ್ಟಿಗಳಾದ ವಿ.ಜಿ. ಶೆಟ್ಟಿ, ಕೆ. ಶ್ರೀಪತಿ ಕಾಮತ್, ನಾರಾಯಣ ಎಂ. ಹೆಗಡೆ, ನಟರಾಜ ಉಪಾಧ್ಯ ಉಪಸ್ಥಿತರಿದ್ದರು.

ಮುರಲಿ ಕಡೆಕಾರ್ ಸ್ವಾಗತಿಸಿ ಪ್ರಸ್ತಾವನೆ ಮಂಡಿಸಿದರು. ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಮೊದಲ ದಿನ ಎಸ್.ವಿ.ಎಚ್. ಪ್ರೌಢಶಾಲೆ ಇನ್ನಂಜೆ ವಿದ್ಯಾರ್ಥಿಗಳಿಂದ ಮೇದಿನಿ ನಿರ್ಮಾಣ ಮತ್ತು ಮಹಿಷ ಮರ್ಧಿನಿ, ಕುತ್ಯಾರಿ ಸೂರ್ಯಚೈತನ್ಯ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಮಹಿಷ ವಧೆ ಯಕ್ಷಗಾನ ಪ್ರದರ್ಶನಗಳು ಸೊಗಸಾಗಿ ಜರಗಿದವು.



