ಉಡುಪಿ : ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಹದಿನೆಂಟು ವರ್ಷಗಳಿಂದ ನಿರಂತರವಾಗಿ ನಡೆಸಿ ಬರುತ್ತಿರುವ ಕಿಶೋರ ಯಕ್ಷಗಾನ ಸಂಭ್ರಮ ಕಾರ್ಯಕ್ರಮದ 2025ರ ಸಂಕಿರಣ ಬ್ರಹ್ಮಾವರ ಬಂಟರ ಸಂಘದ ಆವರಣದಲ್ಲಿ ನಿರ್ಮಿಸಿದ ಅದ್ದೂರಿ ವೇದಿಕೆಯಲ್ಲಿ ಜರಗಿತು. ಟ್ರಸ್ಟ್ 94 ಪ್ರೌಢಶಾಲೆಗಳಲ್ಲಿ ಯಕ್ಷಗಾನದ ಪ್ರಾಥಮಿಕ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡುತ್ತಿದ್ದು, ವಿದ್ಯಾರ್ಥಿಗಳಿಂದ ಪ್ರದರ್ಶನಗಳ ಶುಭಾರಂಭ ನಡೆಯಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಯಕ್ಷಗಾನ ಶ್ರೀಮಂತ ಕಲಾಪ್ರಕಾರ ಮಾತ್ರವಲ್ಲ, ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಪುರಾಣ ಜ್ಞಾನ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ವಿಶಿಷ್ಟ ಶೈಕ್ಷಣಿಕ ಮಾಧ್ಯಮವಾಗಿದೆ. ಇಂತಹ ಮಹತ್ವದ ಕಲಾ ಸಂಸ್ಕಾರವನ್ನು ಹವಣಿಸುತ್ತಿರುವ ಟ್ರಸ್ಟ್ ಮತ್ತು ಉಡುಪಿ ಯಕ್ಷಗಾನ ಕಲಾಂಗ ಅಭಿನಂದನಾರ್ಹರು ಎಂದರು.

ಉಡುಪಿ ಶಾಸಕ ಹಾಗೂ ಟ್ರಸ್ಟ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಆರೂರ್ ತಿಮ್ಮಪ್ಪ ಶೆಟ್ಟರು ಮಾತನಾಡಿ, ಯಕ್ಷಗಾನ ಕಲೆ ಬದುಕಿಗೆ ಸಂಸ್ಕಾರ ನೀಡುವ ಮಹತ್ವದ ಪರಂಪರೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಬಿ. ಭುಜಂಗ ಶೆಟ್ಟಿ, ಆರೂರು ತಿಮ್ಮಪ್ಪ ಹೆಗ್ಡೆ, ದಿನಕರ ಹೇರೂರು, ಟಿ. ಭಾಸ್ಕರ್ ರೈ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ, ಬಿರ್ತಿ ರಾಜೇಶ ಶೆಟ್ಟಿ, ಎಂ. ಗಂಗಾಧರ ರಾವ್, ರಾಜು ಕುಲಾಲ್, ಮಾರಾಳಿ ಪ್ರತಾಪ ಹೆಗ್ಡೆ, ಬಿ. ಆರ್. ನಿತ್ಯಾನಂದ, ನಾರಾಯಣ ಎಂ. ಹೆಗ್ಡೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆ ಮಂಡಿಸಿದರು. ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಪೂಜಾರಿ ವಂದಿಸಿದರು. ಕೋಶಾಧಿಕಾರಿ ಗಣೇಶ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ನಂತರ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ನಿರ್ದೇಶಕ ನರಸಿಂಹ ತುಂಗ ಅವರ ನಿರ್ದೇಶನದಲ್ಲಿ ವೀರ ವೃಷಸೇನ ಯಕ್ಷಗಾನ ಪ್ರದರ್ಶನಗೊಳ್ಳಿತು. ಪ್ರೇಕ್ಷಕರಿಂದ ಪ್ರದರ್ಶನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.



