ಉಡುಪಿ: ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಂಬಿಎ ವಿದ್ಯಾರ್ಥಿ ಯೋರ್ವ ಮೃತಪಟ್ಟ ಘಟನೆ ನಡೆದಿದೆ. ಭಜನೆ ಹಾಡುಗಾರ ಮತ್ತು ತಬಲ ವಾದಕರಾಗಿಯೂ ಗುರುತಿಸಿಕೊಂಡಿರುವ ವಿದ್ಯಾರ್ಥಿ ಕಿದಿಯೂರಿನ ಸಂಕೀರ್ತನ್ (28) ಮೃತಪಟ್ಟವರು. ಮೂಡುಬಿದಿರೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ಎಂಬಿಎ ಕಲಿಯುತ್ತಿದ್ದರು. ಕುಂದಾಪುರದಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ – 66ರಲ್ಲಿ ಸಾಗುತ್ತಿದ್ದ ಕಾರನ್ನು ಅದರ ಚಾಲಕ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೂಡ್ಸ್ ವಾಹನವೊಂದಕ್ಕೆ ಮತ್ತು ಅದರ ಹಿಂದೆ ಸಾಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಕಾರನ್ನು ರಸ್ತೆ ವಿಭಾಜಕಕ್ಕೆ ಹತ್ತಿಸಿ ವಿರುದ್ಧ ದಿಕ್ಕಿನಲ್ಲಿ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿದ್ದರಿಂದ ಮೂವರು ಗಾಯಗೊಂಡಿದ್ದರು. ಬಳಿಕ ಕಾರು ಬೈಕ್ಗೆ ಡಿಕ್ಕಿ ಹೊಡೆಯಿತು. ಬೈಕ್ ಸವಾರ ಸಂಕೀರ್ತನ್ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.