ಉಡುಪಿ ; ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಮನೆಯಲ್ಲಿ ಜ.30ರಂದು ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ತಿರುಕ್ಕುರುಂಕುಡಿ ನಿವಾಸಿಗಳಾದ ಎಸಾಕ್ಕಿ ರಾಜ (28) ಮತ್ತು ನಂಬಿ ರಾಜ (23) ಬಂಧಿತ ಆರೋಪಿಗಳು.

ದಿವಾಕರ ಶೆಟ್ಟಿ ಕುಟುಂಬಸ್ಥರು ಮನೆಗೆ ಬೀಗ ಹಾಕಿ ಮುಂಬೈಗೆ ತೆರಳಿದ್ದ ವೇಳೆ ಕಳ್ಳರು ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯಲ್ಲಿರುವ ಮನೆಗೆ ನುಗ್ಗಿ ದೇವರ ಕೋಣೆ ಹಾಗೂ ಬೆಡ್ರೂಮ್ನ ಕಪಾಟಿನಿಂದ ಬೆಳ್ಳಿ, 30 ಗ್ರಾಂ ಚಿನ್ನ, ವಾಚ್ ಹಾಗೂ ನಗದು ಸೇರಿ ಸುಮಾರು 19.05 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ತಮಿಳುನಾಡಿನ ಇನ್ನೂ ಮೂವರು ಪ್ರಮುಖ ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆ ಹಾಗೂ ಕಳವಾದ ಸೊತ್ತು ವಶಪಡಿಸಿಕೊಳ್ಳುವ ಕಾರ್ಯ ಮುಂದುವರಿದಿದೆ. ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದರು.



