ಉಡುಪಿ: ಕಾಲದಿಂದ ಕಾಲಕ್ಕೆ ಕಾನೂನುಗಳು ಬದಲಾಗುತ್ತಿರುತ್ತವೆ. ಅನೇಕ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಆದರೆ ಹಳ್ಳಿಯಲ್ಲಿ ನಮ್ಮ ಹಿರಿಯರು ಕಟ್ಟಿದ ಗಾದೆ ಮಾತುಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಸಿಜೆಎಮ್ ಎಮ್. ಪುರುಷೋತ್ತಮ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ” ಪೋಕ್ಸೊ ಕಾಯ್ದೆ”ಯ ಮಾಹಿತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ನಮ್ಮ ಪೂರ್ವಿಕರು ಯಾವುದೇ ಪಿಹೆಚ್ಡಿ ಪಡೆಯದಿದ್ದರೂ, ಜೀವನದ ಅನುಭವದ ಮೂಲಕ ಕಟ್ಟಿರುವ ಗಾದೆ ಮಾತುಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ಅದುವೇ ಶಾಶ್ವತ. “ಮಕ್ಕಳನ್ನು ದೇವರಂತೆ ಕಾಣು” ಎಂದು ಶತಮಾನಗಳ ಹಿಂದೆಯೇ ಹಿರಿಯರು ತಿಳಿಸಿದ್ದರು. ಇಂದು “ಮಕ್ಕಳನ್ನು ದೇವರಂತೆ ಕಂಡರೇ” ಪೋಕ್ಸೊ ಪ್ರಕರಣಗಳು ದಾಖಲಾಗುವುದು ತಪ್ಪುತ್ತದೆ ಎಂದವರು ನುಡಿದರು.

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಪ್ರೋ.ಡಾ.ನಿರ್ಮಲಾ ಕುಮಾರಿ ಮಾತನಾಡಿ, ಭಾರತದ ಸಂವಿಧಾನ 15 ನೇ ಅನುಚ್ಛೇದವು ಯಾರನ್ನು ತಾರತಮ್ಯ ಮಾಡಬಾರದು ಎಂದು ಹೇಳುವುದಲ್ಲದೇ, ಶೋಷಣೆಯನ್ನು ತಡೆಗಟ್ಟಲು ವಿಶೇಷ ಕಾಯ್ದೆಯನ್ನು ರಚಿಸಲು ಅವಕಾಶವನ್ನು ಕಲ್ಪಿಸಿದೆ. ಹೀಗಾಗಿ ಪೋಕ್ಸೊ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ರಾಘವೇಂದ್ರ, ಪೋಶ್ ಸೆಲ್ ಸಂಯೋಜಕಿ ಲವಿಟಾ ಡಿ’ಸೋಜಾ ಉಪಸ್ಥಿತರಿದ್ದರು.

ಪತ್ರಕರ್ತ ರಕ್ಷಿತ್ ಬೆಳಪು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ನವ್ಯಾ ವಂದಿಸಿದರು. ನಿಶಾ ನಿರೂಪಿಸಿದರು.



