ಉಡುಪಿ: ವಾಹನದಟ್ಟಣೆ ಇರುವ ಕಲ್ಸಂಕ ವೃತ್ತದ ಬಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ನಗರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ನಡೆದಿದೆ. ವಿಕೃತ ಕೃತ್ಯದಿಂದ ಕೆಲಕಾಲ ಭಯದ ವಾತಾವರಣ ಸೃಷ್ಟಿಸಿದ ಆಗುಂತಕ ಪಾನಮತ್ತನಾಗಿದ್ದನೋ ಅಥವಾ ಮನೋರೋಗಿಯೇ ಎಂಬುದು ಸ್ಪಷ್ಟವಾಗಿಲ್ಲ. ವಾಹನ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ರೀತಿಯಲ್ಲಿ ವ್ಯಕ್ತಿ ವರ್ತಿಸಿದ್ದಾನೆ ಎನ್ನಲಾಗಿದೆ.

ಪೆಟ್ರೋಲ್ ತುಂಬಿಸಿಕೊಂಡ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ವ್ಯಕ್ತಿ, ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೊಬ್ಬಿಡುತ್ತಿದ್ದ. ಹಲವು ಬಾರಿ ಪೊಲೀಸರು ಪೆಟ್ರೋಲ್ ಬಾಟಲಿಯನ್ನು ಕಸಿದುಕೊಂಡರೂ, ಮತ್ತೊಮ್ಮೆ ಬಾಟಲಿಯಲ್ಲಿ ಪೆಟ್ರೋಲ್ ತಂದು ತನ್ನ ಮೈಮೇಲೆ ಸುರಿದುಕೊಂಡು ಆತಂಕ ಸೃಷ್ಟಿಸಿದ್ದಾನೆ.

ಸ್ಥಳದಲ್ಲೇ ಇದ್ದ ಪೊಲೀಸರು ಸಮಯಪ್ರಜ್ಞೆ ಪ್ರದರ್ಶಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಸಂಭವನೀಯ ಭಾರೀ ದುರಂತವನ್ನು ತಪ್ಪಿಸಿದರು. ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಮನವೊಲಿಸಿ, ಆತನ ಊರಾದ ಗದಗಕ್ಕೆ ರವಾನಿಸುವ ವ್ಯವಸ್ಥೆ ಮಾಡಿದರು. ಈ ಕಾರ್ಯಾಚರಣೆಯಲ್ಲಿ ನಗರ ಪೊಲೀಸ್ ಠಾಣೆಯ ಎಸ್ಐ ನಾರಾಯಣ ಹಾಗೂ ಎಸ್ಐ ಗಂಗಪ್ಪ ಪ್ರಮುಖ ಪಾತ್ರವಹಿಸಿದ್ದರು. ಅವರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



