ಉಡುಪಿ: ಸಾಹಿತ್ಯ, ಕಲೆ ಮತ್ತು ರಂಗಭೂಮಿಯಂತಹ ವಿವಿಧ ಸೃಜನಾತ್ಮಕ ಕ್ಷೇತ್ರಗಳನ್ನು ಬೆಂಬಲಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಿರ್ದಿಗಂತ ತಂಡ ಇದೀಗ ಕರಾವಳಿಗೂ ತನ್ನ ವಿಸ್ತಾರವನ್ನು ಮಾಡಿದೆ. ಕರಾವಳಿ ನಿರ್ದಿಗಂತ ತಂಡದ ಉದ್ಘಾಟನಾ ಕಾರ್ಯಕ್ರಮ ಜ. 18ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ನಟ, ನಿರ್ದೇಶಕ ಪ್ರಕಾಶ್ ರಾಜ್ ತಿಳಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಸಾಂಸ್ಕೃತಿಕ ನೆಲೆಯೊಂದಿಗೆ ನಿರ್ದಿಗಂತದ ಚಟುವಟಿಕೆಗಳನ್ನು ಜೋಡಿಸುವ ಉದ್ದೇಶದಿಂದ ಈ ಹೊಸ ಹೆಜ್ಜೆ ಇಡಲಾಗುತ್ತಿದೆ ಎಂದರು. ಜ. 18ರಂದು ಸಂಜೆ 6 ಗಂಟೆಗೆ ಸಾಹಿತಿ ಫಕೀರ್ ಮಹಮಮದ್ ಕಟಪಾಡಿ ಕರಾವಳಿ ನಿರ್ದಿಗಂತ ತಂಡವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಅದೇ ದಿನ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ರಚನೆಯು, ರೋಹಿತ್ ಬೈಕಾಡಿ ನಿರ್ದೇಶನದ ‘ಕುಣಿ ಕುಣಿ ನವಿಲೇ’ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ.

ಜ. 19ರಂದು ಸಂಜೆ 6.30ರಿಂದ ಸಂಗಮ ಕಲಾವಿದರು, ಮಣಿಪಾಲ ಇವರಿಂದ ಬೀಚಿ ಹಾಗೂ ಶ್ರೀನಿವಾಸ ಐಯ್ಯರ್ ಅವರ ಲೇಖನಾಧಾರಿತ ‘ನಾಟಕ ದೇವರ ಆತ್ಮಹತ್ಯೆ’ ಪ್ರದರ್ಶನ ನಡೆಯಲಿದೆ. ಜ. 20ರಂದು ಸಂಜೆ ಲೋಹಿಯಾ ಅವರ ಲೇಖನಾಧಾರಿತ ‘ರಾಮ, ಕೃಷ್ಣ, ಶಿವ’ ನಾಟಕ ಪ್ರೇಕ್ಷಕರ ಮುಂದೆ ಬರಲಿದೆ. ಜ. 21ರಂದು ಸಂಜೆ 6 ಗಂಟೆಗೆ ಪ್ರಕಾಶ್ ರಾಜ್ ಹಾಗೂ ನಿರ್ದಿಗಂತ ತಂಡದಿಂದ ಸಮಸತೆಯ ಹಾಡುಗಳು ನಡೆಯಲಿದ್ದು, ಸಂಜೆ 7.15ರಿಂದ ದಾರಿಯೋ ಪೋ ಅವರ ‘ಕಾಂಟ್ ಪೇ ವೋಂಟ್ ಪೇ’ ಆಧಾರಿತ ‘ಕೊಡಲ್ಲ ಅಂದ್ರ ಕೊಡಲ್ಲ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದಿಗಂತ ತಂಡದ ರಾಜು ಮಣಿಪಾಲ, ಗಣೇಶ ಮಂದಾರ್ತಿ, ಅನುಷ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದು, ಕರಾವಳಿಯಲ್ಲಿ ರಂಗಭೂಮಿಗೆ ಹೊಸ ಚೈತನ್ಯ ತುಂಬುವ ನಿರೀಕ್ಷೆ ವ್ಯಕ್ತಪಡಿಸಿದರು.



