ಉಡುಪಿ : ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ನಡೆಸಿದ ಸಿ.ಎಸ್.ಇ.ಇ.ಟಿ (ಕಂಪನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಎಂಟ್ರನ್ಸ್ ಟೆಸ್ಟ್ – ಜನವರಿ 2026) ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜು, ಹೆಮ್ಮಾಡಿಯ ವಾಣಿಜ್ಯ ವಿಭಾಗ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 43 ವಿದ್ಯಾರ್ಥಿಗಳ ಪೈಕಿ 42 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿ ಸಿ.ಎಸ್. ಎಕ್ಸಿಕ್ಯೂಟಿವ್ ಪ್ರೋಗ್ರಾಂಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಕಾಲೇಜು ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ.

ಉತ್ತೀರ್ಣ ವಿದ್ಯಾರ್ಥಿಗಳಲ್ಲಿ ಸಹನಾ (168), ಅಮೂಲ್ಯ ಆರ್. ಶೆಟ್ಟಿ (166), ಧನುಷ್ ಆರ್. ಹೆಬ್ಬಾರ್ (164), ಪ್ರಥಮ್ ಜಿ. ಕಾಂಚನ್ (159), ಶಮ್ಯ (156), ಶಿವಂ (155), ಶಯನ್ (154), ಶ್ರೀಶಾ ಆರ್. ಶೆಟ್ಟಿ, ಆಶಿತಾ ತೊಳಾರ್ (154), ದ್ರಶ್ಯ ಜಿ. ದೇವಾಡಿಗ ಹಾಗೂ ಸಂಕೇತ್ ಎಸ್. ಬಿಲ್ಲವ (153) ಸೇರಿದಂತೆ ಹಲವರು ಉತ್ತಮ ಅಂಕಗಳನ್ನು ಗಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿತವಾದ ಈ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉನ್ನತ ಮಟ್ಟದ ತರಬೇತಿ ನೀಡುತ್ತಾ ಶೈಕ್ಷಣಿಕ ಗುಣಮಟ್ಟವನ್ನು ಸಾಬೀತುಪಡಿಸಿದೆ ಎಂದು ಶಿಕ್ಷಣ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಈ ಅಪೂರ್ವ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.



