ಉಡುಪಿ : ಹೆಬ್ರಿ ಮುಖ್ಯ ರಸ್ತೆ ಕೆಳಪೇಟೆ ಭಾಗದ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯಲ್ಲಿ ಉಂಟಾಗಿರುವ ಭಾರಿ ಹೊಂಡ–ಗುಂಡಿಗಳು ಹಾಗೂ ಧೂಳುಮಯ ಅವ್ಯವಸ್ಥೆ ವಿರುದ್ಧ ನೊಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯ ದುಸ್ಥಿತಿಯಿಂದ ವಾಹನ ಚಾಲಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ದಿನನಿತ್ಯ ಅಪಾಯವನ್ನು ಎದುರಿಸುವಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವಾರದೊಳಗೆ ರಸ್ತೆ ದುರಸ್ತಿ ನಡೆಸದಿದ್ದಲ್ಲಿ, ಸಾರ್ವಜನಿಕರು, ವಾಹನ ಚಾಲಕ–ಮಾಲಕರು ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯನ್ನು ತಡೆಹಿಡಿದು ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರಸ್ತೆಯ ದುರವಸ್ಥೆಯಿಂದ ಅಪಘಾತಗಳ ಭೀತಿ ಹೆಚ್ಚಾಗಿದ್ದು, ಧೂಳಿನಿಂದ ಆರೋಗ್ಯ ಸಮಸ್ಯೆಗಳೂ ಎದುರಾಗುತ್ತಿವೆ. ಕೂಡಲೇ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



