ಉಡುಪಿ : ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಪರಿಣಿತಿ ಪಡೆದರೆ ಭವಿಷ್ಯದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಕರಾವಳಿಯ ಯಕ್ಷಗಾನ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರವಾಗಿದೆ ಮತ್ತು ಕಲಿಕೆಯ ಕ್ಷಮತೆಯು ಹೆಚ್ಚಿಸುತ್ತದೆ. ಹಾಗಾಗಿ ನಮ್ಮ ಕಾಲೇಜಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸರ್ಟಿಫಿಕೇಟ್ ಕೋರ್ಸ್ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಂ.ಜಿ. ಎಂ. ಕಾಲೇಜು ಪ್ರಾಚಾರ್ಯ ಪ್ರೊ ಲಕ್ಷ್ಮೀ ನಾರಾಯಣ ಕಾರಂತ ಹೇಳಿದರು.
ಅವರು ಸೋಮವಾರ ಕಾಲೇಜಿನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಮತ್ತು ನಾಟಕ ಸಂಘ ಹಾಗು ಯಕ್ಷಗಾನ ಕೇಂದ್ರ ಇಂದ್ರಾಳಿ ಜಂಟಿಯಾಗಿ ನಡೆಸುವ ಪ್ರಸಕ್ತ ಸಾಲಿನ ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ಕೇಂದ್ರದ ಮೂಲಕ ಮಾಹೆ ವಿಶ್ವವಿದ್ಯಾನಿಲಯ ಯಕ್ಷಗಾನ ಸರ್ಟಿಫಿಕೆಟ್ ಕೋರ್ಸ್ ಗೆ ಸಿದ್ಧಪಡಿಸುತ್ತಿದೆ. ಪ್ರಾಯೋಗಿಕವಾಗಿ ಎಂ. ಜಿ. ಎಂ. ಕಾಲೇಜು ಕೋರ್ಸ್ ಆರಂಭಿಸುವುದರ ಮೂಲಕ ಮುನ್ನುಡಿ ಇಟ್ಟಿರುವುದು ಶ್ಲಾಘನೀಯ ಎಂದು ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿಯ ಆಡಳಿತಾಧಿಕಾರಿ ಡಾ. ಜಗದೀಶ ಶೆಟ್ಟಿ ಶುಭ ಹಾರೈಸಿದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಪ್ರೊ ಶೈಲಜಾ ಕನ್ನಡ ವಿಭಾಗ ಮುಖ್ಯಸ್ಥ ಡ. ವಸಂತ್ ಕುಮಾರ್ ಯಕ್ಷ ಗುರುಗಳಾದ ಕೃಷ್ಣಮೂರ್ತಿ ಭಟ್ ಬಸವ ಮುಂಡಡಿ ಉಪಸ್ಥಿತರಿದ್ದರು. ಯಕ್ಷಗಾನ ಮತ್ತು ನಾಟಕ ಸಂಘದ ಸಂಚಾಲಕ ಪ್ರೊ ರಾಘವೇಂದ್ರ ತುಂಗ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು ಕಾರ್ಯದರ್ಶಿ ವೈಭವಿ ನಿರೂಪಿಸಿದರು ಸಾತ್ವಿಕ್ ವಂದಿಸಿದರು.