ಉಡುಪಿ: ಉಪ್ಪೂರು–ಕೊಳಲಗಿರಿ ಪ್ರದೇಶದ ಸರಕಾರಿ ಜಾಗದಲ್ಲಿ ಸುರಿಯಲಾಗಿದ್ದ ತ್ಯಾಜ್ಯ ರಾಶಿಗೆ ಸೋಮವಾರ ಸಂಜೆ ಅಕಸ್ಮಾತ್ ಬೆಂಕಿ ತಗುಲಿ, ಸ್ಥಳೀಯರಲ್ಲಿ ಆತಂಕ ಮೂಡಿಸಿತು. ಬೆಂಕಿ ಹೊತ್ತು ಉರಿಯುತ್ತಿರುವುದರನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ.

ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ತ್ವರಿತ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾದರು. ತುರ್ತು ಕಾರ್ಯಾಚರಣೆಯ ಮೂಲಕ ಬೆಂಕಿ ವ್ಯಾಪಿಸುವ ಸಾಧ್ಯತೆಗೆ ಅಗ್ನಿಶಾಮಕ ಇಲಾಖೆ ತಡೆಯೊಡ್ಡಿದೆ.

ಈ ಪ್ರದೇಶದಲ್ಲಿ ಈ ಹಿಂದೆ ಸಹ ಇಂತಹ ಬೆಂಕಿ ಅವಘಡಗಳು ನಡೆದಿರುವುದಾಗಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮದ ಈ ಸರಕಾರಿ ಜಾಗದಲ್ಲಿ ಯಾರೋ ಕಿಡಿಗೆಡಿಗಳು ಅಕ್ರಮವಾಗಿ ತ್ಯಾಜ್ಯ ಸುರಿದು ನಂತರ ಬೆಂಕಿ ಹಚ್ಚುತ್ತಿರುವ ಅನುಮಾನ ವ್ಯಕ್ತವಾಗಿದೆ. ಈ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಸಿ.ಸಿ. ಕ್ಯಾಮೆರಾ ಅಳವಡಿಸಿದರೂ ಕೂಡ ಆರೋಪಿಗಳು ಪತ್ತೆಯಾಗದೇ ಇರುವುದನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಗಳು ಶೀಘ್ರ ಕ್ರಮ ಕೈಗೊಂಡು, ಅಕ್ರಮ ತ್ಯಾಜ್ಯ ಸುರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಕರೆ ಸ್ವೀಕರಿಸಿ ತುರ್ತು ಪ್ರತಿಕ್ರಿಯೆ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸ್ಥಳೀಯರು ಧನ್ಯವಾದ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



