ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಪರೂಪದ ಹಾಗೂ ವೈಶಿಷ್ಟ್ಯಪೂರ್ಣ ಭಕ್ತಿಸಮರ್ಪಣೆ ನಡೆಯಲಿದೆ. ದೆಹಲಿ ಮೂಲದ ಶ್ರೀಕೃಷ್ಣ ಭಕ್ತರೋರ್ವರು ಕೊಡುಗೆಯಾಗಿ, ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿದ ಚಿನ್ನದ ಹಾಳೆಯ ಭಗವದ್ಗೀತೆಯನ್ನು ಜನವರಿ 8ರಂದು ಕೃಷ್ಣ ಸನ್ನಿಧಿಯಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ.

ಭಗವದ್ಗೀತೆಯ 18 ಅಧ್ಯಾಯಗಳಲ್ಲಿನ 700 ಶ್ಲೋಕಗಳನ್ನು ಚಿನ್ನದ ಹಾಳೆಯಲ್ಲಿ ಅಂದವಾಗಿ ಮುದ್ರಿಸಲಾಗಿದ್ದು, ವಿಶ್ವಗೀತಾ ಪರ್ಯಾಯ ಸಮಾರೋಪದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮದೊಂದಿಗೆ ಅರ್ಪಣೆ ನಡೆಯಲಿದೆ.

ಚಿನ್ನದ ರಥದಲ್ಲಿ ಭಗವದ್ಗೀತೆಯ ಮೆರವಣಿಗೆಯ ಮೂಲಕ ಕೃಷ್ಣನಿಗೆ ಸಮರ್ಪಿಸುವ ಈ ಅಪರೂಪದ ಕ್ಷಣಕ್ಕೆ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ.



