ಉಡುಪಿ : ಮಂಗಳೂರು ನಲ್ಲಿ ತಡರಾತ್ರಿ ನಡೆದ ರೌಡಿ ಶೀಟರ್ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ನಡೆದ ಬಳಿಕ ಉಡುಪಿಯ ಆತ್ರಾಡಿಯಲ್ಲಿ ಕೊಲೆ ಯತ್ನ ನಡದಿದೆ ಎನ್ನುವ ಪ್ರಕರಣ ದಾಖಲಾಗಿದೆ. ಉಡುಪಿಯ ಬಡಗುಬೆಟ್ಟಿನ ನಿವಾಸಿ ಆಟೋ ಚಾಲಕ ಅಬೂಬಕ್ಕರ್ (50), ರಾತ್ರಿ 11.15 ರ ಸುಮಾರಿಗೆ ಯಾರೋ ದಿನೇಶ್ ಎನ್ನುವವರ ಕರೆ ಮೇರೆಗೆ ಬಾಡಿಗೆಗೆ ತೆರೆಳಿದ್ದಾಗ ಈ ಘಟನೆ ನಡೆದಿದೆ. ಆತ್ರಾಡಿಯಿಂದ ಮದಗ ಕಡೆಗೆ ಮುಖ್ಯರಸ್ತೆಯಲ್ಲಿ, ಆತ್ರಾಡಿ ಗ್ಯಾಸ್ ಪೆಟ್ರೋಲ್ ಬಂಕ್ ಬಳಿ ಬರುತ್ತಿರುವಾಗ ಹಿಂದಿನಿಂದ ಒಂದು ಮೋಟಾರ್ ಸೈಕಲ್ ನಲ್ಲಿ 2 ವ್ಯಕ್ತಿಗಳು ಆಟೋ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಅಬೂಬಕ್ಕರ್ ಗಮನಿಸಿದ್ದಾರೆ. ಬಳಿಕ ಆಟೋ ರಿಕ್ಷಾ ಬಳಿ ಬಂದ ಆಗಂತುಕರು ಅವಾಚ್ಯವಾಗಿ ನಿಂದಿಸಿ, ಆಟೋ ನಿಲ್ಲಿಸಲು ಯತ್ನಿಸಿದ್ದಾರೆ. ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಸಹಸವಾರ ತಲವಾರ ಮಾದರಿಯ ವಸ್ತು ಹಿಡಿದು ತೋರಿಸಿದ್ದಾನೆ, ಇದರಿಂದ ಭಯಗೊಂಡ ಅಬುಬಕ್ಕರ್ ಶೇಡಿಗುಡ್ಡೆ ಬಳಿರಸ್ತೆಯಲ್ಲಿ ಆಟೋ ರಿಕ್ಷಾವನ್ನು ನಿಲ್ಲಿಸಿ ಓಡಲು ಪ್ರತ್ನಿಸಿದಾಗ ಆಗ ಬೈಕ್ ನಲ್ಲಿದ್ದ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿದ್ದ ತಲವಾರಿನಿಂದ ಬೀಸಿದ್ದಾನೆ. ಅಬೂಬಕ್ಕರ್ ತಲವಾರ ಹೊಡೆತದಿಂದ ತಪ್ಪಿಸಿಕೊಂಡ ಸಿಟ್ಟಿಗೆ ಇನ್ನೊಬ್ಬ ವ್ಯಕ್ತಿ ರಿಕ್ಷಾಕ್ಕೆ ಬಾಟಲಿಯಿಂದ ಹಾನಿ ಮಾಡಿದ್ದಾನೆ. ತನ್ನ ಹತ್ಯೆಯ ಉದ್ದೇಶಕ್ಕೆ ವ್ಯಕ್ತಿ ಬಂದಿದ್ದರು ಎಂದು ಅಬೂಬಕ್ಕರ್ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ತನಿಖೆ ನಡೆಸಿದ ಪೊಲೀಸ್ ರು ಹಿರಿಯಡಕ ಬೊಮ್ಮರ ಬೆಟ್ಟು ಸಂದೇಶ್ (31), ಮತ್ತು ಬಾಪೂಜಿ ಧರ್ಕಾಸ್ ಸುಶಾಂತ್ (32) ಇವರುಗಳನ್ನು ಬಂಧಿಸಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಹಾಸ್ ಶೆಟ್ಟಿ ಕೊಲೆಗೆ ಪ್ರತಿಕಾರಕ್ಕೆ ಸಂಚು ಎನ್ನುವ ರೀತಿಯಲ್ಲಿ ಈ ಪ್ರಕರಣ ವೈರಲ್ ಆಗಿದೆ.

ಈ ವಿಚಾರವಾಗಿ ಉಡುಪಿ ಜಿಲ್ಲಾ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಸುಹಾಸ್ ಶೆಟ್ಟಿಗೆ ಹತ್ಯೆಗೆ ಪ್ರತಿಕಾರ ಎನ್ನುವಂತೆ ಈ ಪ್ರಕರಣ ದಾಖಲಿಸಿರುವುದು ತಪ್ಪು ಎಂದಿದೆ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಮುಸಲ್ಮಾನ್ ವ್ಯಕ್ತಿಯ ಮೇಲೆ ನನಡೆದ ಹಲ್ಲೆ ಪ್ರಕರಣವನ್ನು ತಿರುಚಲಾಗಿದೆ. ಮಂಗಳೂರಿನ ಸುಹಾಶ್ ಶೆಟ್ಟಿ ಪ್ರಕರಣಕ್ಕೂ ಆತ್ರಾಡಿಯ ಅಬೂಬ್ಬಕರ್ ಹಲ್ಲೆ ಪ್ರಕರಣಕ್ಕೂ ಸಾಮ್ಯತೆ ಇಲ್ಲ. ಹಲ್ಲೆ ಪ್ರಕರಣವನ್ನು ಪ್ರತಿಕಾರದ ಕೊಲೆಯತ್ನ ಪ್ರಕರಣವೆಂದು ಬಿಂಬಿಸಿರುವ ಹಿಂದೆ ರಾಜಕೀಯ ಅಡಗಿದೆ. ಉಡುಪಿ ಜಿಲ್ಲೆ ಕೋಮು ಸೌಹಾರ್ದಕ್ಕೆ ಹೆಸರಾದ ಜಿಲ್ಲೆ, ಹಾಗಾಗಿ ಪೋಲಿಸ್ ಇಲಾಖೆ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ಮಾಡಬೇಕು. ಮಂಗಳೂರು ಘಟನೆಗೂ ಈ ಘಟನೆಗೂ ಸಾಮ್ಯತೆ ಮಾಡಿ ವೈಭವಿಕರಿಸುವುದು ಬೇಡ, ಇದೊಂದು ಸಣ್ಣ ಘಟನೆ. ಹತ್ಯೆಗೆ ಪ್ರತೀಕಾರವೆಂಬಂತೆ ಬಿಂಬಿಸಿ ಕೇಸ್ ದಾಖಲು ಮಾಡಿದಲ್ಲಿ ಬಿಜೆಪಿ ಹೋರಾಟ ನೆಡೆಸುತ್ತದೆ. ಹಿಂದೂ ಪರ ಸಂಘಟನೆಯ ಜೊತೆಗೆ ಸ್ಟೇಷನ್ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದೆ.