ಉಡುಪಿ : ಇಂದಿನ ರಾಜಕೀಯ ಬದುಕಿನಲ್ಲಿ ಸುಳ್ಳುಗಳು ಕ್ರೂರ ರೂಪದಲ್ಲಿ ಸಮಾಜದ ಮುಂದೆ ನಿಂತಿದ್ದು, ಅವುಗಳನ್ನು ಎದುರಿಸುವುದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ರಂಗಭೂಮಿಯ ಮೂಲಕ ಸತ್ಯವನ್ನು ಹೇಳುವ ಪ್ರಯತ್ನ ಅಗತ್ಯವೆಂದು ಸಾಹಿತಿ ಹಾಗೂ ಚಿಂತಕ ಫಕೀರ್ ಮುಹಮ್ಮದ್ ಕಟಪಾಡಿ ಹೇಳಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಕರಾವಳಿಯ ನಿರ್ದಿಗಂತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿರ್ದಿಗಂತ ಎಂಬ ಪದವೇ ವಿಭಿನ್ನ ಚಿಂತನೆಗೆ ದಾರಿ ತೆರೆದುಕೊಡುತ್ತದೆ. ಕುವೆಂಪು ಅವರ ನಿರ್ದಿಗಂತದ ಕಲ್ಪನೆಯನ್ನು ನಟ ಪ್ರಕಾಶ್ ರಾಜ್ ಮತ್ತಷ್ಟು ವಿಸ್ತಾರಗೊಳಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಿರ್ದಿಗಂತದ ಸ್ಥಾಪಕ, ರಂಗಕರ್ಮಿ ಹಾಗೂ ಚಿತ್ರನಟ ಪ್ರಕಾಶ್ ರಾಜ್ ಮಾತನಾಡಿ, ನಿರ್ದಿಗಂತ ಕೇವಲ ರಂಗ ತರಬೇತಿ ಸಂಸ್ಥೆಯಲ್ಲ, ಹೊಸ ಚಿಂತನೆಗಳು ಮತ್ತು ಪ್ರಯೋಗಗಳ ಮೂಲಕ ಜೀವಂತ ರಂಗಭೂಮಿಯನ್ನೇ ರೂಪಿಸುವ ಆಶಯ ನಮ್ಮದು ಎಂದರು. ರಂಗ ನಿರ್ದೇಶಕ ಗಣೇಶ್ ಮಂದಾರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಿರ್ದಿಗಂತ ತಂಡದಿಂದ ಸಮತೆಯ ಹಾಡು ಪ್ರಸ್ತುತವಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ‘ಮೃಗ ಮತ್ತು ಸುಂದರಿ’ ನಾಟಕ, ಮಧ್ಯಾಹ್ನ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಕ್ಕಳಿಂದ ವಿಜ್ಞಾನ ನಾಟಕ ‘ಕ್ಯೂರಿಯಸ್’ ಪ್ರದರ್ಶನಗೊಂಡಿತು. ಸಂಜೆ ಉದ್ಘಾಟನಾ ಸಮಾರಂಭದ ಬಳಿಕ ‘ಕುಣಿ ಕುಣಿ ನವಿಲೇ’ ಮಕ್ಕಳ ನಾಟಕ ಪ್ರದರ್ಶನಗೊಂಡಿತು.



