ಉಡುಪಿ: ಇ.ಡಿ ತನಿಖೆ ನೆಪದಲ್ಲಿ ಕಟಪಾಡಿ ಕಲ್ತಟ್ಟ ನಿವಾಸಿ ಕೆ. ರಾಘವೇಂದ್ರ ರಾವ್ (45) ಅವರಿಂದ 40 ಲಕ್ಷ ರೂ. ಆನ್ಲೈನ್ ಮೂಲಕ ವಂಚನೆ ನಡೆಸಿದ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಜ.11ರಂದು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಹಾಗೂ ಮುಂಬೈ ಕೊಲಾಬಾ ಪೊಲೀಸ್ ಠಾಣೆಯವರು ಎಂದು ಹೇಳಿಕೊಂಡ ಅಪರಿಚಿತರು ಕರೆ ಮಾಡಿ, ಅವರ ಮೊಬೈಲ್ ಸಂಖ್ಯೆಯಿಂದ ಅಕ್ರಮ ಚಟುವಟಿಕೆ ನಡೆದಿದ್ದು, 4.90 ಕೋಟಿ ರೂ. ಹಣ ವರ್ಗಾವಣೆ ಪ್ರಕರಣದಲ್ಲಿ ಹೆಸರು ಸೇರಿದೆ ಎಂದು ಬೆದರಿಸಿದ್ದಾರೆ. ಬಳಿಕ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡು ವೀಡಿಯೋ ಕರೆ ಮೂಲಕ ತನಿಖೆಗೆ ಸಹಕರಿಸದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ನಂತರ ಪ್ರಕರಣವನ್ನು ಇ.ಡಿಗೆ ವರ್ಗಾಯಿಸಲಾಗಿದೆ ಎಂದು ಹೇಳಿ ಹಣ ವರ್ಗಾಯಿಸುವಂತೆ ಸೂಚಿಸಿದ್ದು, ಇದನ್ನು ನಂಬಿದ ರಾಘವೇಂದ್ರ ರಾವ್ ಅವರು ಜ.16, 19 ಮತ್ತು 23ರಂದು ತಮ್ಮ ಹಾಗೂ ಪತ್ನಿಯ ಖಾತೆಗಳಿಂದ ವಿವಿಧ ಖಾತೆಗಳಿಗೆ ಒಟ್ಟು 40 ಲಕ್ಷ ರೂ. ವರ್ಗಾಯಿಸಿದ್ದಾರೆ. ಈ ಬಗ್ಗೆ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



