ಉಡುಪಿ: 2024ನೇ ಸಾಲಿನಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾದ ಎರಡು ಪ್ರಕರಣಗಳ ಆರೋಪಿಗಳಿಗೆ ಉಡುಪಿ ಜಿಲ್ಲಾ ವಿಶೇಷ ಪೊಕ್ಸೋ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಬೈಂದೂರು ಠಾಣೆಯ ಪ್ರಕರಣದ ಆರೋಪಿ ಬೈಂದೂರು ಗಂಗನಾಡು ನಿವಾಸಿ ರಾಘವೇಂದ್ರ ಗೊಂಡ (35) ಹಾಗೂ ಪಡುಬಿದ್ರಿ ಠಾಣೆಯ ಪ್ರಕರಣದ ಆರೋಪಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಮಂಜುನಾಥ ಪಾತ್ರೋಟ (23) ಶಿಕ್ಷೆಗೆ ಗುರಿಯಾದ ಆರೋಪಿಗಳು.

ಈ ವರ್ಷ 2025ನೇ ಜುಲೈ ತಿಂಗಳಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 320 ಪ್ರಕರಣಗಳು ಇತ್ಯರ್ಥವಾಗಿದ್ದು, ಅವುಗಳಲ್ಲಿ 188 ಪ್ರಕರಣಗಳು ಸಜೆ /ದಂಡ ರೂಪದಲ್ಲಿ ಇತ್ಯರ್ಥವಾಗಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ 2019ನೇ ಸಾಲಿನಲ್ಲಿ ದಾಖಲಾದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಗೆ 18 ತಿಂಗಳ ಜೈಲುವಾಸ ಹಾಗೂ 9,000 ರೂ. ದಂಡವನ್ನು ನ್ಯಾಯಾಲಯವು ವಿಧಿಸಿದೆ.