ಉಡುಪಿ : ಉಡುಪಿ ಜಿಲ್ಲೆಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರ ಸಂದರ್ಭ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಮತ್ತು ಸಾನಿಧ್ಯ ವೃದ್ಧಿಗಾಗಿ ಆಯೋಜಿಸಿದ ನವದುರ್ಗಾ ಲೇಖನ ಯಜ್ಞ ವಾಗೀಶ್ವರಿ ಪೂಜೆಯ ಮೂಲಕ ಆರಂಭಿಸಲಾಗಿತ್ತು. ಭಕ್ತಾಧಿಗಳಿಗೆ ನವದುರ್ಗಾ ಲೇಖನ ಬರೆಯುವ ಅವಕಾಶವನ್ನು ನಿರಂತರವಾಗಿ ಕಲ್ಪಿಸಲಾಗಿದ್ದು, ಅದರಂತೆ ಉಡುಪಿ ಪಾರ್ಟಿ ಹಾಲ್, ಟವರ್ ಆಕಾಶಿಯಾ ಅಪಾರ್ಟ್ಮೆಂಟ್, ತಮನ್ ಕೆಮಯೊರನ್ ಕಂಡೋಮಿನಿಯಮ್, ಕೆಬೊನ್ ಕೊಸೊಂಗ್, ಕೆಮಾಯೊರನ್, ಜಕಾರ್ತ, ಇಂಡೋನೇಷ್ಯಾ ನವದುರ್ಗಾ ಲೇಖನ ಯಜ್ಞ ಬರೆಯುವ ಬಗ್ಗೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಅವರು ಸಂಪೂರ್ಣವಾಗಿ ಶಿಲಾಮಯಗೊಂಡ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬಗ್ಗೆ, ಅಮ್ಮನ ಕಾರಣಿಕದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿ ನವದುರ್ಗಾ ಲೇಖನ ಯಜ್ಞ ಬರೆದು ಸಮರ್ಪಿಸಿ ಅಮ್ಮನ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಉಡುಪಿಯ ನಿಕಟಪೂರ್ವ ಶಾಸಕರಾದ ಕೆ. ರಘುಪತಿ ಭಟ್ ಅವರು ನವದುರ್ಗಾ ಲೇಖವನ್ನು ಬರೆಯವ ವಿಧಾನವನ್ನು ತಿಳಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.

ಇಂಡೋನೇಷ್ಯಾದಲ್ಲಿ ನೆಲೆಸಿರುವ ಭಾರತೀಯರಿಗಾಗಿ ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲ ಇಲ್ಲಿನ ಜಕರ್ತಾದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಇಂಡೋನೇಷ್ಯಾದ ರತ್ನ ಫಾರೆವರ್ ಗ್ರೂಫ್ ಮಾಲಕರಾದ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಇಂಡೋನೇಷ್ಯಾದ ಸಮಿತಿ ಸದಸ್ಯರಾದ ಸುಕೇಶ್ ಶೆಟ್ಟಿ, ವೈಷ್ಣವಿ ಶೆಟ್ಟಿ ಮತ್ತಿತರರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು. ಇಂಡೋನೇಷ್ಯಾ ಇಂಟರ್ನ್ಯಾಷನಲ್ ಕ್ರಿಕೆಟ್ ತಂಡದ ಸದಸ್ಯ ಧನುಷ್ ಶೆಟ್ಟಿ ಹಾಗೂ ದೇವಳದ ಅಭಿವೃದ್ಧಿ ಸಮಿತಿಯ ಅಂತಾರಾಷ್ಟ್ರೀಯ ಸೇವಾ ಸಮಿತಿಯ ಇಂಡೋನೆಷ್ಯಾ ಘಟಕದ ಅಧ್ಯಕ್ಷ ಸುಜಿತ್ ಶೆಟ್ಟಿ ಉಪಸ್ಥಿತಿರಿದ್ದರು.
99,999 ನವದುರ್ಗಾ ಲೇಖನವನ್ನು ಬರೆಯುವ ಮಹಾ ಸಂಕಲ್ಪವನ್ನು ಲೋಕಕಲ್ಯಾಣಾರ್ಥವಾಗಿ ಮತ್ತು ಸಾನಿಧ್ಯ ವೃದ್ಧಿಗಾಗಿ ವಾಗೀಶ್ವರಿ ಪೂಜೆಯ ಮೂಲಕ ಆರಂಭಿಸಿ ಭಕ್ತರಿಗೆ ನವದುರ್ಗಾ ಲೇಖನ ಬರೆಯುವ ಪುಸ್ತಕವನ್ನು ನೀಡಲಾಗಿತ್ತು. ಒಂಬತ್ತು ದಿನಗಳವರೆಗೆ ನವದುರ್ಗೆಯರ ಲೇಖನವನ್ನು ಬರೆದು ಕಾಪು ಅಮ್ಮನ ಸನ್ನಿಧಾನಕ್ಕೆ ಸಮರ್ಪಿಸುವುದು. ಈ ಪುಸ್ತಕ ಕೇವಲ ಪುಸ್ತಕವಾಗದೆ ವರ್ಷಂಪ್ರತಿ ಶರನ್ನವರಾತ್ರಿ ಸಂದರ್ಭದಲ್ಲಿ ವಾಗೀಶ್ವರಿ ಮಾತೆಯಾಗಿ ಪೂಜೆಗೊಳ್ಳುತ್ತದೆ. ಈ ಪುಸ್ತಕವು ಅಮ್ಮನ ಸಾನಿಧ್ಯದಲ್ಲಿ ಶಾಶ್ವತವಾಗಿರುತ್ತದೆ. ನಿರಂತರವಾಗಿ ನವದುರ್ಗಾ ಲೇಖನ ಬರೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.


