ಉಡುಪಿ: ಕಾಶ್ಮೀರದ ಪ್ರಕೃತಿ ಸೌಂದರ್ಯ ಸವಿಯಲು ತೆರಳಿದ್ದ ಪ್ರವಾಸಿಗರಲ್ಲಿ ಹಿಂದುಗಳನ್ನು ಗುರುತಿಸಿ ಅಮಾನುಷವಾಗಿ ನರಮೇಧ ಮಾಡಿದ ಭಯೋತ್ಪಾದಕರ ಕೃತ್ಯಕ್ಕೆ, ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ “ಆಪರೇಶನ್ ಸಿಂಧೂರ್” ಯಶಸ್ವಿಯನ್ನು ಉಡುಪಿಯಲ್ಲಿ ಬುಧವಾರ ಬೆಳಗ್ಗೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟಿನ ಸದಸ್ಯರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ನಗರದ ಚಿತ್ತರಂಜನ್ ಸರ್ಕಲ್ ಬಳಿಯಿಂದ 20 ಅಡಿ ಉದ್ದದ 14 ಅಡಿ ಅಗಲದ ತ್ರಿವರ್ಣ ಧ್ವಜವನ್ನು ಹಿಡಿದು ಚಿತ್ತರಂಜನ್ ಸರ್ಕಲ್ವರೆಗೆ ಮೆರವಣಿಗೆ ಮೂಲಕ ಸಾಗಿದರು. ಮೆರವಣಿಗೆಯುದ್ದಕ್ಕೂ ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ನಿತ್ಯಾನಂದ ಒಳಕಾಡು ತಮಟೆ ಬಾರಿಸಿದರು.ಈ ವೇಳೆ ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು, ಪ್ರಮುಖರಾದ ವಿನಾಯಕ್ ಹೆಗ್ಡೆ, ಸುಧಾಕರ್, ರಾಜೇಶ್ ಶೇಟ್, ತಾರಾನಾಥ್ ಮೇಸ್ತ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಭಾರತೀಯ ಸೇನೆಯ ಪರಾಕ್ರಮವನ್ನು ಯಾರು ಪ್ರಶ್ನಿಸುವಂತಿಲ್ಲ. ಈ ರಾಷ್ಟ್ರದ ಮೇಲೆ ದಂಡೆತ್ತಿ ಬರುವವರಿಗೆ ಉತ್ತರ ನೀಡಲು ನಾವು ಸಿದ್ದ ಎಂಬ ಸಂದೇಶವನ್ನು ರವಾನಿಸಿಯಾಗಿದೆ. ಆಪರೇಶನ್ ಸಿಂಧೂರ್ ಮೂಲಕ ಭಯೋತ್ಪಾದಕರಿಗೆ ಖಡಕ್ ಎಚ್ಚರಿಕೆಯನ್ನು ಕೇಂದ್ರ ಸರಕಾರ ನೀಡಿದೆ. ಸೇನೆಯೊಂದಿಗೆ ಭಾರತೀಯರಾದ ನಾವೆಲ್ಲರೂ ನಿಲ್ಲುತ್ತೇವೆ.
ನಿತ್ಯಾನಂದ ಒಳಕಾಡು (ಸಾಮಾಜಿಕ ಕಾರ್ಯಕರ್ತ, ಉಡುಪಿ)
