ಉಡುಪಿ : ಮಧ್ಯಪ್ರಾಚ್ಯದಲ್ಲಿ ಇರಾನ್–ಇಸ್ರೇಲ್–ಅಮೆರಿಕ ನಡುವಿನ ಉದ್ವಿಗ್ನ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ದೇಶದ ಕೆಲ ಭಾಗಗಳಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ಇದರ ಪರಿಣಾಮ ಈಗ ಕರಾವಳಿಯ ಹೆಸರಾಂತ ದೇವಾಲಯಗಳಿಗೂ ಅಡುಗೆ ಅನಿಲದ ಕೊರತೆ ತಟ್ಟಿದ್ದು, ನಿತ್ಯ ನಡೆಯುವ ಅನ್ನದಾನ ಸೇವೆ ಮುಂದುವರಿಸಲು ಸಂಕಷ್ಟ ಉಂಟಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದಲ್ಲಿಯೂ ಅಡುಗೆ ಅನಿಲದ ಕೊರತೆ ಎದುರಾಗಿದೆ. ದೇವಾಲಯದಲ್ಲಿ ಪ್ರಸ್ತುತ ಕೇವಲ ನಾಲ್ಕು–ಐದು ದಿನಗಳಿಗೆ ಸಾಕಾಗುವಷ್ಟು ಮಾತ್ರ ಅಡುಗೆ ಅನಿಲ ಲಭ್ಯವಿದೆ ಎಂದು ತಿಳಿದುಬಂದಿದೆ. ವರ್ಷದ 365 ದಿನವೂ ಭಕ್ತರಿಗೆ ಅನ್ನದಾನ ಸೇವೆ ನಡೆಯುವ ಈ ದೇವಾಲಯದಲ್ಲಿ ಅನಿಲ ಕೊರತೆಯಿಂದಾಗಿ ಸಮಸ್ಯೆ ತಲೆದೋರಿದ್ದು, ತಾತ್ಕಾಲಿಕವಾಗಿ ಸಾಂಪ್ರದಾಯಿಕ ಕಟ್ಟಿಗೆ ಬಳಸಿ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ದೇವಾಲಯ ಹಾಗೂ ಭಕ್ತರ ಪರವಾಗಿ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ದೇವಾಲಯದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ. ಅಡುಗೆ ಅನಿಲ ಪೂರೈಕೆಯನ್ನು ತ್ವರಿತವಾಗಿ ಸರಿಪಡಿಸುವಂತೆ ಅವರು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ನಡುವೆ, ಕರಾವಳಿ ಭಾಗದ ಇತರ ಕೆಲವು ದೇವಾಲಯಗಳಲ್ಲಿಯೂ ಇದೇ ರೀತಿಯ ಅನಿಲ ಕೊರತೆ ಎದುರಾಗುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.



