ಪಣಜಿ: ರಜನಿಕಾಂತ್ ಅಭಿನಯದ ʻಕಬಾಲಿʼ ಚಿತ್ರ ನಿರ್ಮಾಪಕ ಕೆಪಿ ಚೌಧರಿ (44) ರ ಉತ್ತರ ಗೋವಾದ ಹಳ್ಳಿಯೊಂದರ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. ಚೌಧರಿ ಅವರ ಮೃತದೇಹವು ಸಿಯೋಲಿಮ್ ಗ್ರಾಮದ ಬಾಡಿಗೆ ಆವರಣದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದ್ದು, ನಂತರ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಉತ್ತರ) ಅಕ್ಷತ್ ಕೌಶಲ್ ತಿಳಿಸಿದ್ದಾರೆ.

2016ರಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯಿಸಿದ್ದ ಕಬಾಲಿ ಚಿತ್ರದ ತೆಲುಗು ಅವತರಣಿಕೆಯ ಬಿಡುಗಡೆಯ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿ, ಕೆಪಿ ಚೌಧರಿ ಎಲ್ಲರನ್ನ ನಿಬ್ಬೇರಗಾಗಿಸಿದ್ದರು. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಸರ್ದಾರ್ ಗಬ್ಬರ್ ಸಿಂಗ್ ಮತ್ತು ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಚಿತ್ರಗಳನ್ನು ವಿತರಣೆ ಮಾಡಿದ ಹೆಗ್ಗಳಿಕೆ ಕೂಡ ಇವರಿಗಿದೆ. ಇಂತಹ ಕೆ.ಪಿ.ಚೌಧರಿ ನಿನ್ನೆ ಉತ್ತರ ಗೋವಾದ ಸಿಯೋಲಿಮ್ ಗ್ರಾಮದ ತಮ್ಮ ಬಾಡಿಗೆ ಮನೆಯಲ್ಲಿ ಜೀವಕಳೆದುಕೊಂಡ ವಿಚಾರವನ್ನ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ದೃಢಪಡಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇನ್ನು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ತನಿಖೆ ಬಳಿಕ ಸತ್ಯ ಹೊರಬರಬೇಕಿದೆಯಾದರೂ ಅವರ ಈ ನಿರ್ಧಾರಕ್ಕೆ ಡ್ರಗ್ಸ್ ಮಾಯಾಜಾಲ ಕಾರಣ ಇರಬಹುದು ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ಈ ಹಿಂದೆ ಮಾದಕ ಮಾಯಾಜಾಲದಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ 2023ರಲ್ಲಿ ಕೆ.ಪಿ.ಚೌಧರಿಯವರನ್ನ ಬಂಧಿಸಲಾಗಿತ್ತು. 87.75 ಗ್ರಾಂ ಕೊಕೇನ್ ಇವರ ಬಳಿ ಪತ್ತೆಯಾಗಿತ್ತು. ಕೆ.ಪಿ.ಚೌಧರಿ ಅಸುನೀಗಿದ್ದರ ಹಿಂದೆ ಯಾವ ಕಾರಣ ಇದೆ ಎಂಬುದು ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.