ಉಡುಪಿ : ಹಿರಿಯಡಕ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಈಜಲು ತೆರಳಿ ದುರ್ಘಟನೆಯಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಪೆರ್ಡೂರು ಅಡಪಾಡಿ ಮಡಿಸಾಲು ಹೊಳೆಯಲ್ಲಿ ನಡೆದಿದೆ. ಪೆರ್ಡೂರು ಆಲಂಗಾರು ನಿವಾಸಿ ಶ್ರೀಶಾಂತ್ ಶೆಟ್ಟಿ(15) ಮೃತಪಟ್ಟ ಬಾಲಕ.

ಮೃತ ವಿದ್ಯಾರ್ಥಿ ನವೆಂಬರ್ 9 ರಂದು ಮಧ್ಯಾಹ್ನ 12.15ಕ್ಕೆ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪೆರ್ಡೂರಿಗೆ ತೆರಳಿದ್ದ. ಅಲ್ಲಿ ತಂದೆಯನ್ನು ಬಿಟ್ಟು ಅಜ್ಜಿ ಮನೆಯಾದ ಅಲಂಗಾರಿಗೆ ಹೋಗಿ, ಅಜ್ಜಿ ಮೊಬೈಲ್ನಿಂದ ತಂದೆಗೆ ಕರೆ ಮಾಡಿ ನಾನು ಅಜ್ಜಿ ಮನೆಯ ಬಳಿ ಇರುವ ನದಿಗೆ ಆಟವಾಡಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದನೆಂಬ ಮಾಹಿತಿ ದೊರೆತಿದೆ. ಆದರೆ ಮಧ್ಯಾಹ್ನ 3 ಗಂಟೆಯಾದರೂ ಮಗ ಮನೆಗೆ ಮರಳಿ ಬಾರದ ಕಾರಣ ತಂದೆ ಚಿಂತಿತರಾಗಿ ಅಜ್ಜಿಯವರನ್ನು ವಿಚಾರಿಸಿದಾಗ, ಆತನ ಅಜ್ಜಿ ಮಗ ಅಜ್ಜಿ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ನಂತರ ತಂದೆ ಅಲಂಗಾರು, ಪೆರ್ಡೂರು ಹಾಗೂ ಸುತ್ತಮುತ್ತ ಹುಡುಕಾಟ ನಡೆಸಿದರೂ ಹುಡುಗ ಪತ್ತೆಯಾಗಲಿಲ್ಲ. ಈ ಬಗ್ಗೆ ತಂದೆಯು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿತ್ತು.

ತೀವ್ರ ಹುಡುಕಾಟದ ಬಳಿಕ, ಪೆರ್ಡೂರು ಅಡಪಾಡಿಯ ಮಡಿಸಾಲು ಹೊಳೆಯಲ್ಲಿ ಆ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಬಾಲಕ ಹೊಳೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಪೋಸ್ಟ್ಮಾರ್ಟಂನಿಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.



