ಉಡುಪಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪದ ಹರ್ಕೂರಿನಲ್ಲಿ ಮನೆಯ ಹಿಂದಿನ ಸ್ನಾನಗೃಹಕ್ಕೆ ತೆರಳುವ ವೇಳೆ ಹಠಾತ್ ಕುಸಿದು ಬಿದ್ದು ಅಸ್ವಸ್ಥಗೊಂಡ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಹರ್ಕೂರು ಕಟ್ಟಿನಮಕ್ಕಿ ನಿವಾಸಿ ಶಶಿಧರ ದೇವಾಡಿಗ (25) ಮೃತ ಯುವಕನಾಗಿದ್ದಾರೆ.

ಬಿಬಿಎ ವ್ಯಾಸಂಗ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ವರ್ಕ್ ಫ್ರಮ್ ಹೋಮ್ ಮೂಲಕ ಊರಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯ ದಿನ ಅವರು ಮನೆಯ ಹಿಂದಿನ ಸ್ನಾನಗೃಹಕ್ಕೆ ಹೋಗುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಅಜ್ಜಿ ಅಕ್ಕಯ್ಯ ಅವರು ತಕ್ಷಣ ನೆರವಿಗೆ ಧಾವಿಸಿ ಆರೈಕೆ ಮಾಡಿದರು. ಆ ವೇಳೆ ಶಶಿಧರ ಅವರು ಉಸಿರು ಕಟ್ಟುತ್ತಿರುವುದಾಗಿ ಹೇಳಿ ಎದೆ ಹಿಡಿದು ನರಳಾಡುತ್ತಿದ್ದರು ಎನ್ನಲಾಗಿದೆ.

ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ ನಂತರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮೃತರ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



