ಉಡುಪಿ: ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪದ ಹಳ್ಳಿಹೊಳೆ ಗ್ರಾಮದ ರಾಮನ ಹಕ್ಲು ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್–ಬಾಹರ್ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ.

ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮ ನಿವಾಸಿಗಳಾದ ಉಮೇಶ್ (26), ಗಣೇಶ್ (34), ಸಂತೋಷ (39), ಸುರೇಂದ್ರ (29) ಹಾಗೂ ರವಿ (41) ಬಂಧಿತ ಆರೋಪಿಗಳು. ಡಿಸೆಂಬರ್ 25ರಂದು ಬೆಳಿಗ್ಗೆ 74ನೇ ಉಳ್ಳೂರು ಕಡೆ ಗಸ್ತಿನಲ್ಲಿದ್ದ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕ ಐ.ಆರ್. ಗಡ್ಡೇಕರ್ ಅವರಿಗೆ ಮಾಹಿತಿ ಲಭಿಸಿದ ಹಿನ್ನೆಲೆ ಸ್ಥಳಕ್ಕೆ ದಾಳಿ ನಡೆಸಲಾಗಿದೆ. ಈ ವೇಳೆ ಆರೋಪಿಗಳಿಂದ ಜುಗಾರಿ ಆಟಕ್ಕೆ ಬಳಸಿದ್ದ 2,300 ರೂಪಾಯಿ ನಗದು, ಇಸ್ಪೀಟ್ ಎಲೆಗಳು ಹಾಗೂ ಹಸಿರು ಬಣ್ಣದ ಮೆಶ್ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.



