ಉಡುಪಿ : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬಸ್ರೂರಿನ ಹಿರಿಯ ಸೂಲಗಿತ್ತಿ ಶ್ರೀಮತಿ ಲಕ್ಷ್ಮಿ ಪೂಜಾರ್ತಿ ಅವರನ್ನು ಕುಂದಾಪುರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ಕುಂದಾಪುರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರ ಉಪಸ್ಥಿತಿಯಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ ಹಾಗೂ ತಂಡವು ಬಸ್ರೂರಿನ ಗುಂಡಿಗೋಳಿ ಪ್ರದೇಶದಲ್ಲಿರುವ ಲಕ್ಷ್ಮಿ ಪೂಜಾರ್ತಿ ಅವರ ಸ್ವಗೃಹಕ್ಕೆ ತೆರಳಿ ಗೌರವ ಸಲ್ಲಿಸಿತು.

ಬಸ್ರೂರು ಪ್ರದೇಶದ ಅನೇಕ ಬಸುರಿಯರಿಗೆ ಸುಖಮಯ ಹೆರಿಗೆ ನೆರವೇರಿಸುವ ಮೂಲಕ ಸೇವೆ ಸಲ್ಲಿಸಿರುವ ಲಕ್ಷ್ಮಿ ಪೂಜಾರ್ತಿ ಅವರು ಸಮಾಜದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಎಷ್ಟು ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದಾರೆ ಎಂಬ ಲೆಕ್ಕವೂ ಅವರ ಬಳಿ ಇಲ್ಲದಿದ್ದರೂ, ಮಹಿಳಾ ಆರೋಗ್ಯದ ಬಗ್ಗೆ ಅವರಿಗಿರುವ ಅನುಭವ ಮತ್ತು ಜ್ಞಾನ ಅಪಾರವಾಗಿದೆ ಎಂದು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು.


ಕಾರ್ಯಕ್ರಮದಲ್ಲಿ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ವೇತಾ ಶ್ರೀನಿಧಿ ಉಪಾಧ್ಯ ಹಾಗೂ ವಿದ್ಯಾ ಸಾಲಿಯನ್, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಅನಿತಾ ಶ್ರೀಧರ್ ಸೇರಿದಂತೆ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ವೇಳೆ ಬಸ್ರೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ನಿಕಟ ಪೂರ್ವ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಮುಖಂಡರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



